A≈õvattha
884
—
888
884
ವಸ್ತು ವಿಜ್ಞಾನದಿಂ ಜೀವನಸಮೃದ್ಧಿ ಮಿಗೆ ।
ವಿಸ್ತರಿಸೆ ವಿಶ್ವೈಕ್ಯಭಾವ ಜನಮನದೊಳ್ ॥
ದೃಷ್ಟಲೋಕದ ಬೆಡಗದೃಷ್ಟವನು ಮರಸದಿರೆ ।
ಸ್ವಸ್ತಿ ಲೋಕಕ್ಕೆಲ್ಲ - ಮಂಕುತಿಮ್ಮ ॥ ೮೮೪ ॥
ಜಗತ್ತಿನಲ್ಲಿರುವ ವಸ್ತುಗಳ ಕುರಿತಾದಂತಹ ವಿಜ್ಞಾನದ ವಿಷಯದಲ್ಲಿ ಹೆಚ್ಚು ಸಂಶೋಧನೆಯಿಂದ ಜನಜೀವನ ಸುಧಾರಿಸುತ್ತದೆ ಮತ್ತು ಜಗತ್ತಿನ ಜನರು ಪರಸ್ಪರ ಹತ್ತಿರವಾಗಿ ಒಂದು ವಿಶ್ವೈಕ್ಯಭಾವ ಉಂಟಾಗುತ್ತದೆ. ಆದರೆ ಕಣ್ಣಿಗೆ ಕಾಣುವ ಈ ಜಗತ್ತಿನ ಬೆಡಗು,ಎಂದರೆ ಮಾಯೆ, ಈ ಜಗತ್ತನ್ನು ಮತ್ತು ಈ ಜಗತ್ತಿನ ಮಾಯೆಯನ್ನು ಸೃಷ್ಟಿಸಿದ, ಆದರೂ ಕಣ್ಣಿಗೆ ಕಾಣದ, ಆ ಪರಮ ಶಕ್ತಿಯ ವಿಸ್ಮರಣೆಯನ್ನುಂಟಾಗದಿದ್ದರೆ ಲೋಕದಲ್ಲಿ ಸ್ವಸ್ತಿ, ಎಂದರೆ ಜನಜೀವನದಲ್ಲಿ ಸ್ವಾಸ್ಥ್ಯ(ಆರೋಗ್ಯ) ಉಂಟಾಗುತ್ತದೆ ಎಂದು, ಜಗತ್ತು ಮತ್ತು ಜಗನ್ನಿಯಾಮಕನ ನಡುವೆ ಸಮನ್ವಯವನ್ನು ಕಂಡುಕೊಳ್ಳಬೇಕಾದ ಅವಶ್ಯಕತೆಯನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Material advances and science will make life easier. That should allow man to contemplate and expand his consciousness to the entire universe. The splendor of what we can see (this world) should not make us forget or ignore what we cannot see (the rest of the universe). If we can do that, there will be prosperity everywhere." - Mankutimma
885
ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ ।
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ॥
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ ।
ಆನಂದ ಧರೆಗಂದು - ಮಂಕುತಿಮ್ಮ ॥ ೮೮೫ ॥
ಜನಪದದಲ್ಲಿ ಶಿಸ್ತನ್ನು ಪಾಲಿಸುವುದರಲ್ಲಿ, ಸಮುಷ್ಟಿಯ ಸಂಪತ್ತನ್ನು ಅನುಭವಿಸುವುದರಲ್ಲಿ, ಜ್ಞಾನದ ಅನುಸಂಧಾನದಲಿ, ಮೌಲಗಳ ಲೆಕ್ಕಾಚಾರದಲ್ಲಿ, ಮಾನವತೆಯೇ ಧರ್ಮವಾಗಿ, ಈ ಭುವಿಯಲ್ಲಿ ಸ್ಥಿರವಾಗಿ ಬೇರೂರಿದಾಗ, ಈ ಭುವಿಗೆ ಅಂದೇ ಆನಂದದ ದಿನ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು,ಈ ಮುಕ್ತಕದಲ್ಲಿ.
"In the discipline of the society, in the way wealth gets distributed, in the way people learn (accumulate knowledge), in the way people evaluate qualities - if there is human values, compassion and morality; then there will be ubiquitous happiness in this world." - Mankutimma
886
ಅಶ್ವತ್ಥವಿಲ್ಲಿ ಬಾಡಿದೊಡೇನು? ಚಿಗುರಲ್ಲಿ; ।
ನಶ್ವರತೆ ವಿಟಪ ಪರ್ಣಂಗಳಲಿ ಮಾತ್ರ; ॥
ಶಾಶ್ವತತೆ ರುಂಡಮೂಲದಲಿ; ಪರಿಚರಿಸದನು ।
ವಿಶ್ವಪ್ರಗತಿಯಂತು - ಮಂಕುತಿಮ್ಮ ॥ ೮೮೬ ॥
ಅಶ್ವತ್ಥ ವೃಕ್ಷವು, ಒಂದುಕಡೆ ಬಾಡಿದರೆ ಮತ್ತೊಂದು ಕಡೆ ಚಿಗುರುವುದು. ಹಾಗೆ ಬಾಡುವುದು, ಕೇವಲ ಕೊಂಬೆಗಳು ಮತ್ತು ಅದರ ಎಲೆಗಳು ಮಾತ್ರ. ಆದರೆ, ಅದರ ಕಾಂಡ ಮತ್ತು ಬೇರುಗಳು ಶಾಶ್ವತವಾಗಿರುತ್ತವೆ. ಹಾಗಾಗಿ ಅದನ್ನು ಉಪಚರಿಸಿದರೆ, ಆ ಮರವು ಹೇಗೆ ಶಾಶ್ವತವಾಗಿರುವುದೋ, ಹಾಗೆಯೇ ಒಂದು ಕಡೆ ಹಳತಾಗಿ ನಾಶವಾಗುತ್ತಿದ್ದರೆ, ಮತ್ತೊಂದು ಕಡೆ ಬೆಳೆಯುತ್ತಿರುವ ಈ ಜಗದ್ವೃಕ್ಷವನ್ನೂ, ಉಪಚರಿಸಿದರೆ, ಈ ವಿಶ್ವದ ಪ್ರಗತಿಯೂ ಸಹ ಇರುತ್ತದೆ ಎಂದು, ಜಗತ್ತಿನ ಜೀವನದ ಮತ್ತು ಅದರ ಪ್ರಗತಿಯ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.
"The progress of this world is like that of the Holy Fig tree. A twig here, some leaves there will wilt and die. But there will be sprouts and fresh leaves elsewhere. The leaves twigs and branches are the only things that are temporary. The trunk and the roots are permanent. The world lives on - only parts of it flourish and perish in time." - Mankutimma
887
ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ ।
ತಿರುಗಿಸಲಿ ತನ್ನ ದೃಷ್ಟಿಯನು ನಿರ್ಮಲದಿಂ ॥
ನಿರತಿಶಯ ಸುಖವಲ್ಲಿ, ವಿಶ್ವಾತ್ಮ ವೀಕ್ಷೆಯಲಿ ।
ಪರಸತ್ತ್ವ ಶಾಂತಿಯಲಿ - ಮಂಕುತಿಮ್ಮ ॥ ೮೮೭ ॥
ಪರಿಪೂರ್ಣ ಸುಖವನ್ನು ಅರಸುವವನು ಮನಸ್ಸಿನಲ್ಲಿ ಕಶ್ಮಲರಹಿತನಾಗಿ, ಅಂತರ್ಮುಖಿಯಾದಾಗ ಅವನಿಗೆ ಅಲ್ಲಿ, ವಿಶ್ವಾತ್ಮಭಾವದಿಂದ, ಬೇಧಗಳು ನಶಿಸಿ, ಪರತತ್ವದ ಶಾಂತಿಯಲ್ಲಿ, ಅಲೌಕಿಕ ಆನಂದದ ಅನುಭವವಾಗುತ್ತದೆ, ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"If you are looking for absolute happiness, then you should turn your search inwards with pure intentions. There you can find happiness that can not bettered. You will have the soul of the universe in your sight and experience complete cosmic peace." - Mankutimma
888
ವ್ಯಕ್ತಿಮಾತ್ರದ ವಿಭವ ವಿಶ್ವಾತ್ಮತಾನುಭವ ।
ಮುಕ್ತಿ ಸುಖವಾಂತರಿಕವದು ನಿರವಧಿಸುಖ ॥
ಭಾಕ್ತ ಪ್ರಪಂಚಸುಖವೆಂತಪರಿಮಿತವಹುದು? ।
ರಿಕ್ತ ಸುಖ ಭಾಹ್ಯ ಸುಖ - ಮಂಕುತಿಮ್ಮ ॥ ೮೮೮ ॥
ವಿಶ್ವಾತ್ಮಾನುಭವ ಎನ್ನುವುದು ವ್ಯಕ್ತಿಗತವಾದ ಅನುಭವ. ನಿರಂತರವಾದ ಆ ಆನಂದದ ಸ್ಥಿತಿ, ಕೇವಲ ಆಂತರಿಕ ಭಾವ. ಈ ಸ್ಥಿತಿ ಮುಕ್ತ ಸ್ಥಿತಿ. ಆದರೆ ಬಾಹ್ಯ ಪ್ರಪಂಚದ ವಿಷಯಗಳ ಮೇಲೆ ಅಧಾರಪಟ್ಟಿರುವ ಸುಖ, ಅಪರಿಮಿತ ಸುಖವಾಗಲು ಹೇಗೆ ಸಾಧ್ಯ? ಹಾಗೆ ಬಾಹ್ಯ ವಸ್ತು, ವಿಷಯ ಮತ್ತು ವ್ಯಕ್ತಿಗಳ ಮೇಲೆ ಆಧಾರಪಟ್ಟಿರುವ ಸುಖ ಕೇವಲ ತಾತ್ಕಾಲಿಕ ಮತ್ತು ಕೀಳುಮಟ್ಟದ ಸುಖ, ಎಂದು ಅಂತರಂಗದ ಅನುಭವದ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"The experience of realization of the universal soul is very personal. It can not be taught, learnt or described. The happiness so got is immense and infinite. How can any happiness got by worldly pleasures even match up? Any such happiness is finite and there will always be other pleasures that will give more happiness." - Mankutimma