World-dance
850
—
853
850
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ ।
ಪ್ರತ್ಯೇಕ ಜೀವದಶೆಯವನಂಗಭಂಗಿ ॥
ಸತ್ಯಸತ್ತ್ವಜ್ವಾಲೆ ವಿಶ್ವಮಾಯಾಲೀಲೆ ।
ಪ್ರತ್ಯಗಾತ್ಮನು ನೀನು - ಮಂಕುತಿಮ್ಮ ॥ ೮೫೦ ॥
ಈ ಜಗತ್ತೆಲ್ಲ, ಆ ಪರಬ್ರಹ್ಮನ ನಾಟ್ಯವಿದ್ದಂತೆ. ಇಲ್ಲಿರುವ ಜೀವಿಗಳೆಲ್ಲವೂ ಅವನ ಆ ನಾಟ್ಯದ ಬೇರೆಬೇರೆ ವಿಧದ ಭಂಗಿಗಳು. ಶುದ್ಧಸತ್ವದ ಆ ಬೆಂಕಿಯೇ ಈ ವಿಶ್ವದಲ್ಲಿ ಮಾಯಾಲೀಲೆಯನ್ನು ತೋರುತ್ತಿದೆ. ನೀನು ಕೇವಲ ಆ ಪರಬ್ರಹ್ಮ ವಸ್ತುವಿನ ವಿಸ್ತೃತ ರೂಪವಷ್ಟೆ, ಎಂದು ಒಂದು ಗಹನವಾದ ತತ್ವವನ್ನು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು.
"The world is nothing but the dance of the creator. Every being is part of the dance as one of his body parts. His original energy flames manifest as the action in this world. You are just a carrier of that energy. " - Mankutimma
851
ಕಣ್ದೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ ।
ಕಣ್ಮುಚ್ಚಿ ನೋಡು, ನಿಶ್ಚಲ ಶುದ್ಧ ಸತ್ತ್ವ ॥
ಉನ್ಮುಖನು ನೀನೆರಡು ಜಗಕವಿರುತಿರಲಾಗ ।
ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ ॥ ೮೫೧ ॥
ಕಣ್ಣನ್ನು ತೆರೆದು ನೋಡಿದರೆ ಪರತತ್ವದ ಪ್ರತಿ ನಿತ್ಯ ಬದಲಾಗುವ ಕೋಟಿ ಕೋಟಿ ರೂಪದ ಸುಂದರ ನೃತ್ಯ, ಲೀಲಾವಿನೋದ. ಕಣ್ಮುಚ್ಚಿ ನೋಡಿದರೆ ಇಡೀ ಜಗತ್ತನ್ನು ಆವರಿಸಿಕೊಂಡು ಆಳುವ ಶುದ್ಧ ಮತ್ತು ನಿಶ್ಚಲ ಪರತತ್ವದ ದರ್ಶನ . ಹೀಗೆ ನೀನು ಎರಡೂ ಸ್ಥಿತಿಗಳನ್ನು ಸಮಭಾವದಿಂದ ನೋಡಿದರೆ ಮನಸ್ಸಿನಂತರಾಳದಲ್ಲಿ ಶಾಂತಿ ನೆಲೆಸುತ್ತದೆ ಎನ್ನುವುದೇ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.
"Open your eyes and see the dance of the Creator in his creation. Close your eyes and you will see the immovable pure truth. If you can see both these worlds and balance them both, then you will find peace in the middle of your heart." - Mankutimma
852
ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು ।
ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ ॥
ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ ।
ಅವಿರತದ ಚೈತನ್ಯ - ಮಂಕುತಿಮ್ಮ ॥ ೮೫೨ ॥
ದಿನ, ವರುಷ ಯುಗಗಳು ಕಳೆದಂತೆ ಮನುಷ್ಯನ ಮನಸ್ಸಿನಲ್ಲಿ ಹೊಸ ಹೊಸ ಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಅವನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾನೆ. ಹೀಗೆ ಆತ್ಮಹಿತವನ್ನು ವೃದ್ಧಿಗೊಳಿಸಿಕೊಳ್ಳಲು, ಆ ಪರತತ್ವದ ಚೈತನ್ಯ ನಿರಂತರ ಕೃಷಿ ಮಾಡುತ್ತಲೇ ಇರುತ್ತದೆ ಎನ್ನುವುದೇ ಈ ಮುಕ್ತಕದ ಹೂರಣ.
"Every day, every year, every epoch, as time flows - there will be new questions, new tests to mankind. In response to these times, mankind's efforts and his evaluation of happiness has changed. Only thing that is constant is the unending energy flow." - Mankutimma
853
ಸಾರ್ವಲೌಕಿಕಸೌಖ್ಯ ನೆಲಸುವನ್ನೆಗಮಿಳೆಯೊ- ।
ಳೊರ್ವನುಂ ಸುಖಿಯಲ್ತು, ದಿಟದಿ. ಪೂರ್ಣದಲಿ ॥
ಒರ್ವನುಬ್ಬಸದ ಬಿಸಿ ವಿಷವಾಯುವಾಗಿ ತಾ ।
ನುರ್ವರೆಯ ಮುಸುಕೀತು - ಮಂಕುತಿಮ್ಮ ॥ ೮೫೩ ॥
ಈ ಭೂಮಿಯ ಮೇಲೆ ಸರ್ವಜನರ ಸುಖ ನೆಲೆಗೊಳ್ಳುವ ತನಕ ಎಲ್ಲರೂ ಸುಖಿಗಳು ಎಂದು ಹೇಳಲು ಆಗುವುದಿಲ್ಲ. ಇಲ್ಲಿ ಎಲ್ಲರೂ ಸರ್ವ ಕಾಲಕ್ಕೂ ಸುಖಿಗಳಲ್ಲ ಎನ್ನುವುದು ಸತ್ಯ. ಏಕೆಂದರೆ ಯಾರೋ ಒಬ್ಬನ ಉಬ್ಬಸದ ಉಸಿರು ವಿಷಗಾಳಿಯಾಗಿ ಈ ಜಗತ್ತನ್ನೇ ಆವರಿಸಿಕೊಳ್ಳಬಹುದು ಎಂದು ಹೇಳುತ್ತಾ ಜಗತ್ತಿನ ಮನುಷ್ಯನ ಬದುಕಿನ ಒಂದು ಆಯಾಮವನ್ನು ನಮಗೆ ತೋರಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"For one to be completely happy in this world, every body (barring none) should be happy - in totality. Even if one of them is unhappy, his sigh filled with grief will become poisonous and consume (envelope) the entire world." - Mankutimma