Under current
839
—
843
839
ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ! ।
ಆವ ಧೂಳಿನೊಳಾವ ಚೈತನ್ಯಕಣವೋ! ॥
ಜೀವವಿಂತಜ್ಞಾತ ಸೂತ್ರದಾಟದ ಬೊಂಬೆ ।
ಭಾವಿಸಾ ಸೂತ್ರಗಳ - ಮಂಕುತಿಮ್ಮ ॥ ೮೩೯ ॥
ಯಾವ ಗಾಳಿಯು ಯಾವ ಧೂಳಿನ ಕಣವನ್ನು ಹೊತ್ತು ತರುತ್ತದೋ, ಯಾವ ಧೂಳಿನ ಕಣದಲ್ಲಿ ಯಾವ ಚೈತನ್ಯವು ಅಡಗಿದೆಯೊ!!!! ಜೀವವೂ ಸಹ ಹೀಗೆಯೇ ಯಾವುದೊ ಒಂದು ಅಜ್ಞಾತ ಶಕ್ತಿಯ ಕೈಯಲ್ಲಿನ ಸೂತ್ರದ ಆಟಕ್ಕೆ ಬೊಂಬೆಯಂತೆ ಕುಣಿಯುತ್ತದೆ. ಆ ಸೂತ್ರಗಳನ್ನು ಭಾವಿಸು ಎಂದು ಹೇಳುತ್ತಾ ಪರಮ ಚೈತನ್ಯವು ಹೇಗೆ ಇಡೀ ಜಗತ್ತನ್ನು ನಡೆಸುತ್ತಿದ್ದರೂ, ತನ್ನ ಕ್ರಿಯೆಯನ್ನು ಸ್ಪಷ್ಟವಾಗಿ ತೋರಗೊಡದೆ ನಿಗೂಢವಾಗಿಟ್ಟಿರುವ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
"One can not know what grain of sand is carried by what wind or what spec of dust is carrying what energy particle. Life is thus a puppet controlled by strings that you cannot see. Try to think and contemplate on those strings." - Mankutimma
840
ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ! ।
ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ! ॥
ಭಾಕ್ತವಾರಾರ ದುಡಿತದಿನೊ ನಿನಗಾಗಿಹುದು! ।
ಗುಪ್ತಗಾಮಿನಿಯೊ ಋಣ - ಮಂಕುತಿಮ್ಮ ॥ ೮೪೦ ॥
ನೀನುಣ್ಣುವ ಆಹಾರ ನಿನಗೆಲ್ಲಿಂದ ಸಿಕ್ಕಿತು? ಆ ಆಹಾರದಲ್ಲಿನ ಅನ್ನದ ಅಕ್ಕಿಯ ಬತ್ತ ಎಲ್ಲಿಂದ ಬಂದಿತೋ? ಆ ಬತ್ತವ ಬೆಳೆಯಲು ಹಾಕಿದ ಗೊಬ್ಬರವೆಲ್ಲಿಯದೋ? ಮತ್ತು ಆ ಬೆಳೆಗೆ ಹನಿಸಿದ ನೀರು ಎಲ್ಲಿಯದೋ? ಆ ಬೆಳೆಯನ್ನು ಬೆಳೆಸಲು ಯಾರ್ಯಾರ ಶ್ರಮ ಸೇರಿದೆಯೋ? ಇವ್ಯಾವುದೂ ನಮಗೆ ತಿಳಿಯುವುದಿಲ್ಲ ಮತ್ತು ಅರ್ಥವೂ ಆಗುವುದಿಲ್ಲ. ಇದೆಲ್ಲ ನಾವು ಪಡೆದುಕೊಂಡು ಬಂದಂತಹ, ಆದರೆ ‘ಅಭೇದನೀಯ ರಹಸ್ಯ ಋಣ’ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Where has this food that you eat come from? The rice is from somewhere. The manure is from elsewhere. Water from somewhere else. The meal has been prepared owing to the efforts of many many people. The debt of food is untraceable." - Mankutimma
841
ನಿನ್ನೆಂಜಲಗುಳಾವ ಕಾಲುವೆಯ ಸೇರುವುದೊ! ।
ಮಣ್ಣಾವುದದರಿಂದೆ ಗರ್ಭವತಿಯಹುದೋ! ॥
ಅನ್ನವದರಿಂದಾರ್ಗೊ! ಲೋಕಕವರಿಂದೇನೊ! ।
ಬಣ್ಣಿಸುವರಾರದನು? - ಮಂಕುತಿಮ್ಮ ॥ ೮೪೧ ॥
ನೀನುಂಡು ಕೈ ತೊಳೆವ ನೀರು ಯಾವ ಕಾಲುವೆಯ ಸೇರುವುದೋ? ಆ ಕಾಲುವೆಯ ನೀರು ಯಾವ ಭೂಮಿಯನ್ನು ತಣಿಸುವುದೋ? ಹಾಗೆ ತಣಿದ ಯಾವ ಭೂಮಿ ಪೈರ ತಳೆಯುವುದೋ? ಆ ಪೈರಿಂದಾಗುವ ಕಾಳಿನ ಆಹಾರ ಯಾರ ಉದರವ ಸೇರುವುದೋ? ಆ ಕಾಳ ತಿಂದವರಿಂದ ಲೋಕಕ್ಕೇನು ಮಾಡುವರೋ? ಎಂಬ ಪ್ರಶ್ನೆಗಳಿಗೆ ನಮಗೆ ಎಂದಿಗೂ ಉತ್ತರ ಸಿಗಲಾರದು ಎಂದು ಜಗತ್ತಿನಲ್ಲಿ ನಡೆಯುವ ವಿಧ್ಯಮಾನಗಳ ನಿಗೂಢತೆಯನ್ನು ಬಣ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"When you spit out, you will not know which stream that goes into. It reaches some land which holds a seed that gets and germinates with life. That becomes food for someone later. Because that person could eat, the world will be effected differently. Who can describe the entire chain of causation?" - Mankutimma
842
ಆವ ನೆಲದಲಿ ಮೇದೊ, ಆವ ನೀರನು ಕುಡಿದೊ ।
ಆವು ಹಾಲ್ಗರೆವುದದನಾರು ಕುಡಿಯುವನೋ! ॥
ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! ।
ಭಾವಿಸಾ ಋಣಗತಿಯ - ಮಂಕುತಿಮ್ಮ ॥ ೮೪೨ ॥
ಯಾವುದೋ ನೆಲದಲ್ಲಿ ಬೆಳೆದ ಹುಲ್ಲನ್ನು ತಿಂದು ಯಾವುದೋ ಕೆರೆಯ ಅಥವಾ ತೊರೆಯ ನೀರನ್ನು ಕುಡಿದು ಒಂದು ಹಸು ಹಾಲನ್ನು ನೀಡುತ್ತದೆ. ಆ ಹಾಲನ್ನು ಯಾರು ಕುಡಿಯುವರೋ ಮತ್ತು ಹಾಗೆ ಕುಡಿದವರಿಂದ ಎಂತಹ ಕಾರ್ಯವಾಗುತ್ತದೆಯೊ ಮತ್ತು ಆ ಕಾರ್ಯದಿಂದ ಈ ಜಗತ್ತಿಗೆ ಏನುಪಯೋಗವೋ ಕಂಡವರಾರು? ಇದು ಋಣಗತಿ, ಇದನ್ನು ಭಾವಿಸು ಎಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"A cow grazes in someone's field, drinks water from some stream and someone milks it. Somebody will drink that milk. From the strength that he gets from drinking the milk, he will do actions that effects the world in some way. Try to think about the chain of causation and debt." - Mankutimma
843
ಸೇರಿರ್ಪುವುಸಿರುಸಿರುಗಳೊಳೆಷ್ಟೊ ಜೀವಾಣು ।
ಹಾರುತಿಹುವೆಷ್ಟೊ ಚೇತನ ಧೂಳುಕಣದೊಳ್ ॥
ಪ್ರಾರಬ್ಧಗತಿಯ ನಿಶ್ಚಯದಿ ತಿಳಿದವರಿಲ್ಲ ।
ಆ ರಹಸ್ಯಕ್ಕೆರಗೊ! - ಮಂಕುತಿಮ್ಮ ॥ ೮೪೩ ॥
ನಾವು ಎಳೆದುಕೊಳ್ಳುವ ಪ್ರತೀ ಉಸಿರಿನಲ್ಲೂ ಬಹಳಷ್ಟು ಜೀವಾಣುಗಳು ಸೇರಿರುತ್ತವೆ. ನಮ್ಮ ಸುತ್ತಲಿನ ಧೂಳಲ್ಲಿ ಚೈತನ್ಯದ ಅದೆಷ್ಟು ಕಣಗಳಿವೆಯೋ!! ಯಾವುದು, ಹೇಗೆ, ಎಲ್ಲಿಂದ ಬಂದು ನಮ್ಮೊಳಕ್ಕೆ ಸೇರಿಕೊಳ್ಳುತ್ತದೆ ಎಂದು ಖಂಡಿತವಾಗಿ ಯಾರಿಂದಲೂ ಹೇಳಲಾಗುವುದಿಲ್ಲ. ಇದೊಂದು ರಹಸ್ಯ ಮತ್ತು ಆ ರಹಸ್ಯಕ್ಕೆ ನಮಿಸು ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"In each breath there is there are so many living cells. On each spec of dust, there is so many energy particles. Each one is just following the consequences of their previous actions. No one can be certain of their next move. Surrender to the mystery that is behind this machinery of causation." - Mankutimma