Kagga Logo

Inner light

554

558

554

ತಿಳಿವಿಗೊಳಿತೆನಿಸುದುದು ನಡೆಯೊಳೇತಕ್ಕರಿದು? ।
ಕುಳಿ ಮೇಡು ದೂರ ಮತಿಮನಸುಗಳ ನಡುವೆ ॥
ಒಳಗಿನಾಯೆಣ್ಣೆ ಬತ್ತಿಗಳೆರಡುಮೊಡವೆರೆಯೆ ।
ಬೆಳಕು ಜೀವೋನ್ನತಿಗೆ - ಮಂಕುತಿಮ್ಮ ॥ ೫೫೪ ॥

ನಮ್ಮ ಅರಿವಿಗೆ ಒಳಿತು ಎನಿಸಿದ್ದು ನಮ್ಮ ನಡತೆಯಲ್ಲಿರುವುದಿಲ್ಲ ಏಕೆ? ನಮಗಿರುವ ತಿಳುವಳಿಕೆ ಮತ್ತು ಮನಸ್ಸಿನ ನಡುವೆ ಬೆಟ್ಟ ಮತ್ತು ಕಮರಿಗಳಷ್ಟು ಅಂತರವಿದೆ. ನಮ್ಮ ಅರಿವು ಮತ್ತು ಮನಸ್ಸುಗಳು ದೀಪದ ಎಣ್ಣೆ ಮತ್ತು ಬತ್ತಿಗಳಂತೆ ಒಂದಕ್ಕೊಂದು ಪೂರಕವಾಗಿದ್ದರೆ ನಮ್ಮ ಜೀವದ ಉನ್ನತಿಗೆ ಬೆಳಕಾಗುತ್ತದೆ ಎಂದು ಮತಿ ಮನಸ್ಸುಗಳ ಪೂರಕತೆಯ ಅವಶ್ಯಕತೆಯನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Intellect knows about the right and the wrong. But the mind does not let us always choose the right. There is a valley (and two hills) difference between the mind and the intellect. Only then they both strive together - like the oil and the wick in a lamp - does life become happy and elevated. - Mankutimma

555

ಧರ್ಮಸಂಕಟದಿ ಮನ ತಲ್ಲಣಿಸುತಿರುವಂದು ।
ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು ॥
ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ ।
ನೆಮ್ಮಲಿನ್ನೇನಿಹುದೊ? - ಮಂಕುತಿಮ್ಮ ॥ ೫೫೫ ॥

ಮನದಲ್ಲಿ ಮೂಡುವ ಭಾವಗಳಲ್ಲಿ, ಅದೋ-ಇದೋ, ಹೇಗೊ-ಹಾಗೋ ಎಂದು ದ್ವಂದ್ವಗಳಲ್ಲಿ ಸಿಲುಕಿದಾಗ ವಿಷಯದ ಮಂಥನ ಅಂತರಂಗದಲ್ಲಿ ಮಾಡಿ ಸರಿಯಾದ ನಿರ್ಣಯವನ್ನು ತೆಗೆದುಕೋ. ಮಮತೆಯನ್ನು ತೊರೆದು ವಿವೇಕದಿಂದ ತೆಗೆದುಕೊಂಡ ನಿರ್ಣಯಗಳನ್ನು ನೀನು ನೆಚ್ಚಿಕೊ ಮತ್ತು ನಂಬಿಕೋ ಎಂದು ಒಂದು ಕ್ರಮವನ್ನು ಆದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

When your mind is faced with an ethical dilemma, then do a critical examination of self - but only after removing self from the equation. When you remove the self, then a good wisdom emerges. Nothing is more reliable than that. - Mankutimma

556

ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ ।
ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ॥
ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ ।
ಸತ್ತ್ವದಚ್ಛಿನ್ನ ಝರಿ - ಮಂಕುತಿಮ್ಮ ॥ ೫೫೬ ॥

ಬದುಕಿನಲ್ಲಿ ನಮ್ಮ ಶಕ್ತಿಗೆ ಮೀರಿದ ಪರೀಕ್ಷೆಯಾದರೆ ಮತ್ತು ನಾವು ಎದುರಿಸುವ ವಿಷಮ ಪರಿಸ್ಥಿತಿಗಳಿಂದ ನಮ್ಮ ಮನದಲ್ಲಿ ನಮಗೆ ಅರ್ಥವಾಗದ ಮತ್ತು ಉತ್ತರವೇ ಸಿಗದ ‘ಏಕೆ ಹೀಗೆ?’ ‘ಇದು ಏನು?’ ‘ಪರಿಹಾರವೇನು?" ಎಂಬಂತಹ ಪ್ರಶ್ನೆಗಳು ಉದ್ಭವವಾದಾಗ, ಅಂತರ್ಮುಖಿಗಳಾದರೆ ನಮಗೆ ಅಲ್ಲಿ ನಿರಂತರ ಹರಿಯುವ ಜ್ಞಾನದ ಝರಿ ಕಾಣುತ್ತದೆ ಮತ್ತು ಆ ಜ್ಞಾನದ ಝರಿಯಲ್ಲಿ ಮಿಂದಾಗ, ಚಿತ್ತ ಹರ್ಶಿತವಾಗುತ್ತದೆ ಎಂದು ಅಂತರಂಗದ ಶಾಂತಿಯ ಉಪಾಯವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

If life throws difficult tests at you or asks you tough questions, turn your thinking inwards. There; Right there you will find all answers - the continuous flow (stream) of cosmic truth. We should know how to tap it. - Mankutimma

557

ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ ।
ಚಿಂತೆ ಕುಮುಲದು, ಹೊಗೆಗಳೊತ್ತವಾತ್ಮವನು ॥
ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೊಲೆ ಕಿಟಿಕಿಯುಂ ।
ಸಂತತದಪೇಕ್ಷಿತವೊ - ಮಂಕುತಿಮ್ಮ ॥ ೫೫೭ ॥

ಅಂತರ್ಮುಖಿಗಳಾದಾಗ, ನಮಗೆ ನಮ್ಮ ಅಂತರಂಗದಲ್ಲಿ ನಡೆಯುವ ವಿಧ್ಯಮಾನಗಳ ಅರಿವಾಗುತ್ತದೆ. ಮನವನ್ನು ಮುಕ್ತವಾಗಿಡದೆ ಎಲ್ಲ ಕದ-ಕಿಟಕಿಗಳನ್ನು ಮುಚ್ಚಿಕೊಂಡುಬಿಟ್ಟರೆ ನಮ್ಮ ಚಿಂತೆ ಒಳಗೊಳಗೇ ಸುಟ್ಟು ಹೊಗೆಯಾಡುತ್ತದೆ ಮತ್ತು ಆ ಹೊಗೆಯ ದಟ್ಟತೆಯಲ್ಲಿ ಅಶಾಂತಿಯಿಂದ ಮನಸ್ಸು ಬುದ್ಧಿ ಆತ್ಮಗಳು ಸೊರಗುತ್ತವೆ. ಹಾಗಾಗಿ ನಮಗೆ ನಿರಂತರದ ಶಾಂತಿ ಬೇಕಿದ್ದಲ್ಲಿ ಮನದ ಗೋಡೆಯಲ್ಲಿ ಕಿಟಕಿಗಳಿರಬೇಕು ಎಂದು ಒಂದು ಸಂದೇಶವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

If your inner conscience has enough windows, then worries will not get built up with in. Those worries can not suffocate your soul since they are let out through the windows. If you want peace, then realize that windows are as important for a house as the walls. Find such windows for yourself. - Mankutimma

558

ಆಳವನು ನೋಡಿ ಬಗೆದಾಡುವ ಮಾತಿಂಗೆ ।
ರೂಢಿಯರ್ಥವದೊಂದು ಗೂಡಾರ್ಥವೊಂದು ॥
ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು ।
ಕೋಲು ಹುಟ್ಟೊಂದು ಬಲ - ಮಂಕುತಿಮ್ಮ ॥ ೫೫೮ ॥

ನಾವು ಕೇಳುವ ಮಾತನ್ನು ಆಳವಾಗಿ ಪರೀಕ್ಷಿಸಿ ನೋಡಿದರೆ, ಮೇಲುನೋಟಕ್ಕೆ ಒಂದು ಅರ್ಥ ಕಂಡರೆ, ಒಳನೋಟಕ್ಕೆ ಬೇರೆ ಅರ್ಥವಿರುವುದು. ಸಾಗರವ ದಾಟುವ ಹಡಗಿಗೆ ಮೇಲಿಂದ ದಿಕ್ಕನ್ನು ಸೂಚಿಸುವ ಹಾಯಿ ಅಥವಾ ಗಾಳಿಪಟದ ಮತ್ತು ಅಡಿಯಲ್ಲಿ ಬಲದಿಂದ ಹಾಕುವ ಹುಟ್ಟಿನ ಬಲವಿದ್ದಂತೆ, ನಾವು ಆಡುವ ಅಥವಾ ಕೇಳುವ ಮಾತಿಗೆ ರೂಢಿಯಲ್ಲಿರುವ ಅರ್ಥವು ಒಂದಿದ್ದರೆ ಗಹನವಾದ ವಿಚಾರದಿಂದ ಕೂಡಿದ ಮತ್ತೊಂದು ಅರ್ಥವಿರುತ್ತದೆ, ಎಂದು ಮಾತು ಮತ್ತು ಅದರ ಅರ್ಥದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

When one thinks a lot and speaks (like the sages did) their words will have more than one meaning - one that is apparent and simple, and another which is involved and mysterious. Understanding both will help us cross this ocean of samsaara (worldly miseries) - just like the boat requires both the sail (apparent) and the rudder (hidden) to move. - Mankutimma