Kagga Logo

A≈õvattha tree of the world

559

563

559

ಪರಮಪದದಲಿ ನೋಡು; ಬೇರುಗಳ್ ವ್ಯೋಮದಲಿ ।
ಧರೆಗಿಳಿದ ಕೊಂಬುರಂಬೆಗಳು, ಬಿಳಲುಗಳು ॥
ಚಿರಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ ।
ಪರಿಕಿಸಿದರರ್ಥವನು - ಮಂಕುತಿಮ್ಮ ॥ ೫೫೯ ॥

ನಿಸರ್ಗದಲ್ಲಿ ಮರವು ಮೇಲಿದ್ದರೆ ಬೇರುಗಳು ಭೂಮಿಯ ಒಳಗೆ ಇರುತ್ತದೆ. ಆದರೆ ಜಗದ್ವೃಕ್ಷದ ಬೇರುಗಳು ಆಕಾಶದಲ್ಲಿ ಅಥವಾ ಪರಮ ಪದದಲ್ಲಿ ಇರುತ್ತದೆ. ಅವು ಪರಮ ಪದದ ಬೇರುಗಳಾದ್ದರಿಂದ ಬದುಕು ಚಿರಂತನ ಮತ್ತು ನಿರಂತರ. ಇದನ್ನು ವಿಶ್ವ ಜೀವಾಶ್ವತ್ಥ ಎಂದು ಕರೆದು ಬದುಕಿನ ಮೂಲ ಮತ್ತು ಅಗಾಧತೆಯನ್ನು ಅರುಹಿ, ಅದರ ಅರ್ಥವನ್ನು ಪರೀಕ್ಷಿಸಿ ನೋಡು ಎಂದು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು

Try looking at the universal true picture - there is a tree with its root in the sky. Towards the earth are its twigs, branches and struts. This is the tree of life. This is the universe symbolized as a Ashwattha tree (root being the supreme being - God, and leaves are beings of this world). Try and analyze its meaning. - Mankutimma [Translator's note: This verse is essence of a shloka from Bhagavadgita - Chapter 15, Verse 1]

560

ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ ।
ತೀವಿರ್ಪುದದು ಕೆಳಗೆ ನಮ್ಮ ಲೋಕದಲಿ ॥
ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು ।
ಸಾವು ಮರಕೇನಿಲ್ಲ - ಮಂಕುತಿಮ್ಮ ॥ ೫೬೦ ॥

ಜೀವನದ ಮೂಲ ಅಥವಾ ಅಧಾರ ಎಲ್ಲೋ ಮೇಲಿದೆ. ಅದು ಇರುವ ಸ್ಥಳ ಪರಮ ಊರ್ಧ್ವ. ಅದಕ್ಕಿಂತ ಮೇಲೆ ಯಾವುದೂ ಇಲ್ಲ. ಆದರೆ ಅದು ಜಗತ್ತಿನಲ್ಲಿ ಎಲ್ಲೆಲ್ಲೂ ಎಂದರೆ ನಮ್ಮ ಲೋಕದಲ್ಲೂ ವ್ಯಾಪಿಸಿಕೊಂಡಿದೆ. ನಾವುಗಳು ಈ ಜಗತ್ವೃಕ್ಷದ ಕಡ್ಡಿ ಮತ್ತು ಎಲೆಗಳು. ನಾವು ಒಣಗಿ ಬಾಡಿ ಉದುರಿದರೂ ಈ ಜಗತ್ವೃಕ್ಷಕ್ಕೆ ಸಾವು ಎಂಬುದು ಇರುವುದಿಲ್ಲ ಎಂದು ಸೃಷ್ಟಿಯ ಸೂಕ್ಷ್ಮತೆಯನ್ನು,ವ್ಯಾಪ್ತಿಯನ್ನು ಮತ್ತು ನಿರಂತರತೆಯನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

The root source of life is at the very top of the tree (inverted) in the Supreme Being. It sends out the life giving freshness to our world. We are the twigs and leaves of the tree. We blossom and wilt in time. But there is no death to the tree itself. - Mankutimma

561

ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ ।
ಕಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ॥
ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ ।
ಸ್ಪಂದನವೊ ಬ್ರಹ್ಮನದು - ಮಂಕುತಿಮ್ಮ ॥ ೫೬೧ ॥

ಅಶ್ವತ್ಥ ವೃಕ್ಷವು ಒಂದು ಕಡೆ ಬಾಡಿದರೆ ಒಂದುಕಡೆ ಚಿಗುರುವುದು. ಕೆಲ ಕೊಂಬೆಗಳು ಒಣಗುತ್ತಿದ್ದರೆ ಮತ್ತೊಂದು ಕಡೆ ಮೇಲೆ(ಮುಂಡದಲಿ) ಹೊಸ ಚಿಗುರ ತಳೆಯುತ್ತದೆ. ಅದೇ ರೀತಿ ಈ ಜಗದ್ವೃಕ್ಷವೂ ಸಹ ಒಂದು ”ಲಯ”ದಲ್ಲಿ ಬದಲಾಗುತ್ತಾ, ಎಂದೆಂದೂ ಬಾಡದ, ಹಳೆಯದಾಗದ ಮತ್ತೆ ಮತ್ತೆ ಹೊಸತನವನ್ನು ತಳೆಯುವ ರೀತಿಯಲ್ಲಿದೆ ಮತ್ತು ಚಲನ ರೂಪದಲ್ಲಿರುವ ಆ ಬ್ರಹ್ಮನೇ ಈ ಜಗತ್ತು ಎಂದು ಸೃಷ್ಟಿಯ ಸ್ವರೂಪವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರ ಈ ಮುಕ್ತಕದಲ್ಲಿ.

The tree blossoms in one side, and wilts in another. Branches may recede while it expands at the head (which is down). The tree is forever new as well as old. The spirit running through the tree is of the supreme being. - Mankutimma

562

ಎಲೆಗಳನು ಕಡ್ಡಿ, ಕಡ್ಡಿಯ ರಂಬೆಕೊಂಬೆಗಳು ।
ತಳೆದು ಪೆರ್ಚಿಸುತಿಹುವು ಮರದ ಬಾಳ್ಸಿರಿಯ ॥
ಸ್ಥಲವೊಂದು ನಿನಗಿಹುದು ವಿಶ್ವವೃಕ್ಷದೊಳಂತು ।
ಹಳಿಯದಿರು ನಿನ್ನಿರವ - ಮಂಕುತಿಮ್ಮ ॥ ೫೬೨ ॥

ಒಂದು ಅಶ್ವತ್ಥ ವೃಕ್ಷದಲ್ಲಿ ಎಲೆಗಳನ್ನು ಕಡ್ಡಿಗಳೂ, ಕಡ್ಡಿಗಳನ್ನು ರೆಂಬೆಗಳು, ರೆಂಬೆಗಳನ್ನು ಕೊಂಬೆಗಳೂ ತಳೆದು ಆ ಮರದ ಸೊಬಗನ್ನು ಹೆಚ್ಚಿಸುತ್ತದೆ. ಅದೇ ರೀತಿ ಈ ಜಗದ್ವೃಕ್ಷದ ಎಂದರೆ ವಿಶ್ವಜೀವನದ ವೃಕ್ಷದಲ್ಲಿ ಮತ್ತು ಅದರ ಸೊಬಗಿನಲ್ಲಿ ನಿನಗೂ ಒಂದು ಪಾತ್ರವಿದೆ. ಹಾಗಾಗಿ ನಿನ್ನ ಬಾಳನ್ನು ನೀ ಜರಿಯದಿರು, ಹಳಿಯದಿರು ಎಂದು ಜಗತ್ತಿನಲ್ಲಿ ಜನಿಸುವ ಪ್ರತೀ ಜೀವಿಯ ಪಾತ್ರದ ಕುರಿತು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

In this tree of life, the leaves are supported by twigs, twigs by the branches. This way they are all enhancing the beauty of the nature. Every one has his own space in this tree. So, do not hate your existence. - Mankutimma

563

ಬಿಳಲಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ ।
ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ॥
ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ ।
ತಿಳಿದದನು ನೆರವಾಗು - ಮಂಕುತಿಮ್ಮ ॥ ೫೬೩ ॥

ಈ ಜಗದ್ವೃಕ್ಷದಲ್ಲಿ ನೀನು ಬಿಳಲಲ್ಲ, ಬೇರಲ್ಲ,ಮುಂಡವಲ್ಲ,ಕಾಂಡವಲ್ಲ,ಚಿಗುರಲ್ಲ,ಹೂವಲ್ಲ,ಕಾಯಿ ಹಣ್ಣೂ ಅಲ್ಲ. ಆ ವೃಕ್ಷದ ಸಹಸ್ರಾರು ಎಲೆಗಳಲ್ಲಿ ನೀನೂ ಸಹ ಒಂದು ಎಲೆ. ‘ನಾನೇ’ ಎನ್ನುವ ಭಾವ ಬಿಟ್ಟು ‘ ನಾನೂ ಎಲ್ಲರಂತೆ’ ಎಂದು ಈ ಬದುಕೆಂಬ ವೃಕ್ಷದಲ್ಲಿ ಒಂದಾಗಿ ಆ ವೃಕ್ಷಕ್ಕೆ ನೆರವಾಗು ಎಂದರೆ ಒಟ್ಟಾರೆ ಬದುಕಿಗೆ ಪೂರಕವಾಗಿ ಜೀವಿಸು ಎಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

You are not the struts, not the roots, not the canopy or the branches, not the sprouts, not the flowers or the fruits. You are just a leaf - among the many many leaves in this tree of life. Understand your role and be of use (help). - Mankutimma