Difficulty and diversity
629
—
633
629
ವೈವಿಧ್ಯವೊಂದುಕೃಪೆ ನಮಗಿರುವ ಕಷ್ಟದಲಿ ।
ಆವರಿಸದಳಲ್ ಎಲ್ಲರನುಮೊಂದೆ ಸಮಯ ॥
ನೋವಿಲ್ಲದರು ನೊಂದವರನು ಸಂತಯಿಸುತಿರೆ ।
ಜೀವನವು ಕಡಿದಹುದೆ? - ಮಂಕುತಿಮ್ಮ ॥ ೬೨೯ ॥
ವೈವಿಧ್ಯತೆಯೇ ನಮಗೆ ಆ ಪರಮಾತ್ಮ ಕರುಣಿಸಿರುವ ಕೃಪೆ. ಎಲ್ಲರನ್ನೂ ಒಂದೇ ಬಾರಿ ಕಷ್ಟಗಳು ಆವರಿಸುವುದಿಲ್ಲ, ಹಲ ನೋವಿಲ್ಲದವರು ಹಲ ನೋವಿರುವವರನ್ನು ಸಂತೈಸುತ್ತಾ ಇರುವಾಗ ಬದುಕು ಕಷ್ಟವಾಗುವುದಿಲ್ಲ, ಎಂದು ಬದುಕಿನ ಸುಖ ದುಃಖಗಳ ಮತ್ತೊಂದು ಆಯಾಮವನ್ನು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
We are all troubled by miseries. The only saving grace is the variety. Not all of us are burdened with sorrow at the same time. Those who are not sorrow will console the ones who are sad. Life cannot be difficult now. Can it?" - Mankutimma
630
ಸ್ಥೂಲಸೂಕ್ಷ್ಮ ವಿವೇಕರಹಿತೇಷ್ಟ ಬಂಧುಜನ ।
ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ॥
ಸಾಲವನು ನಿನ್ನಿಂದ ಸಲಿಸಕೊಳಬಂದವರು ।
ತಾಳುಮೆಯಿನವರೊಳಿರು - ಮಂಕುತಿಮ್ಮ ॥ ೬೩೦ ॥
ವಿಷಯಗಳ ಸೂಕ್ಷ್ಮತೆ ಮತ್ತು ಸ್ಥೂಲತೆಯನ್ನು ಅರಿಯದೆ ನಮ್ಮೊಡನೆ ನಡಕೊಳ್ಳುವ ನಮ್ಮ ಬಂಧು ಮಿತ್ರರು ಕಾಲನ ಕರೆಗೆ ನಮ್ಮನ್ನು ಅಣಿಗೊಳಿಸುತ್ತಾರೆ. ನಾವು ಜನ್ಮ ಜನ್ಮಾಂತರದಲ್ಲಿ ಬಹುಜನರಿಂದ ಪಡೆದ ಸಾಲವನ್ನು ಹಿಂತಿರುಗಿ ಪಡೆಯಲು ಬಂದವರೇ ಇವರೆಲ್ಲ. ಹಾಗಾಗಿ ಇವರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರು ಎಂದು ಪರರ ವ್ಯವಹಾರದಿಂದ ನಮ್ಮ ಮೇಲೆ ಆಗುವ ಪ್ರಭಾವವನ್ನು ಎದುರಿಸುವ ಪರಿಯನ್ನು ಭೋಧಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Your relatives and friends may not be always nice to you. They will treat you badly once in a while. They are the faithful soldiers of time who soften you before pushing you into its mouth as food. They are only extracting a previous debt from you - just like you would be doing from them in a different circumstance. You must be patient with them." - Mankutimma
631
ಸರಿಗೆಪಂಚೆಯೊ ಹೊದಿಕೆ, ಹರಕುಚಿಂದಿಯೊ ಮೈಗೆ ।
ಪರಮಾನ್ನ ಭೋಜನವೊ, ತಿರುಪೆಯಂಬಲಿಯೋ ॥
ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ ।
ಕರುಬು ಕೊರಗೇತಕೆಲೊ - ಮಂಕುತಿಮ್ಮ ॥ ೬೩೧ ॥
ರೇಶಿಮೆಯ ಪಂಚೆಯನ್ನು ಉಟ್ಟರೂ, ಹರಿದ ಚಿಂದಿಯನ್ನು ಉಟ್ಟರೂ ಪರಿಣಾಮ ಒಂದೇ ಮತ್ತು ಪರಮಾನ್ನವನ್ನು ಉಂಡರೂ, ಭಿಕ್ಷೆಯೆತ್ತಿ ಗಂಜಿಯನ್ನು ಕುಡಿದರೂ ಪರಿಣಾಮ ಒಂದೇ. ಹಾಗಾಗಿ ‘ನಿನ್ನ ಬಳಿ ಏನೇ ಇದ್ದರೂ ಅಥವಾ ಇರದಿದ್ದರೂ ಕೊರಗದೆ ಬದುಕು’ ಎಂದು ಬದುಕಿನಲ್ಲಿ ಸಂತೋಷದ ಹಾದಿಯನ್ನು ತೋರಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
A rich person may have a silk cloth with embroidery to wear over his body. A poor person may wear just rags. They may eat multi course meals and collected alms respectively. But in the final analysis, both end in the same fate - death. Even after knowing this, why do you feel jealous and worry?" - Mankutimma
632
ಕಿವುಡುತನ ತಪ್ಪೀತೆ ರನ್ನ ಕುಂಡಲದಿಂದ? ।
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ॥
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ ।
ಜವರಾಯ ಸಮವರ್ತಿ - ಮಂಕುತಿಮ್ಮ ॥ ೬೩೨ ॥
ಕಿವಿಯಲ್ಲಿ ರತ್ನದ ಕುಂಡಲಗಳನ್ನು ಧರಿಸಿದರೆ ಇರುವ ಕಿವುಡುತನ ತಪ್ಪೀತೆ? ಕೇವಲ ಮೃಷ್ಟಾನ್ನವನ್ನು ತಿಂದರೆ ದೇಹ ಪ್ರಾಯ ಸಂದಂತೆ ಜೋತು ಬೀಳುವುದು ತಪ್ಪೀತೆ? ಭೂಮಿಯಲ್ಲಿನ ಪ್ರಕೃತಿಗೆ ಅನುಗುಣವಾಗಿ ಆಗುವ ಪರಿಣಾಮಗಳಿಗೆ ಬಡವ-ಬಲ್ಲಿದನೆಂಬ ಬೇಧವಿರುವುದಿಲ್ಲ. ಎಲ್ಲರ ಬದುಕನ್ನೂ ಸಮನಾಗಿ ಕೊನೆಗಾಣಿಸುವ ಆ ಯಮರಾಯ ಸಮವಾಗಿ ವರ್ತಿಸುತ್ತಾನೆ ಎಂದು ಬದುಕಿನ ಪರಮ ಸತ್ಯವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
Will the ear not go deaf over time by wearing a gem studded ear piece? Can good food stop the skin from developing wrinkles over age? In the effects of the world on the body, there is no difference between the rich and the poor. Death is the final leveler." - Mankutimma
633
ಸಾಧ್ಯಪಡದಾರಿಗಂ ನರಭಾಲಪಟ್ಟವನು ।
ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು ॥
ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ ।
ಬುದ್ಧಿನುಡಿ ಸೈರಣೆಯೆ - ಮಂಕುತಿಮ್ಮ ॥ ೬೩೩ ॥
ಪೂರ್ವಕರ್ಮವನ್ನು ಸಂಪೂರ್ಣವಾಗಿ ಒಂದೇ ಬಾರಿಗೆ ಅಳಿಸಿಹಾಕಲು ಯಾರಿಗೂ ಸಾಧ್ಯವಾಗುವುದಿಲ್ಲ. ಆ ಪೂರ್ವಕರ್ಮದ ಹೊದಿಕೆಯನ್ನು ಹೊದ್ದೇ, ಎಂದರೆ ಕರ್ಮವನ್ನು ಹೊತ್ತುಕೊಂಡೇ, ಮಾಡುತ್ತಲೇ, ಸವೆಸುತ್ತಲೇ ಜೀವನವನ್ನು ಸಾಗಿಸಬೇಕು. ಆದರೆ ಹಾಗೆ ಬದುಕುವಾಗ ಸೈರಣೆಯಿಂದ, ತಾಳ್ಮೆಬಿಡದೆ, ವಿವೇಕದಿಂದ ಜೀವಿಸಬೇಕು ಎಂದು ಪೂರ್ವಕರ್ಮಾಧಾರಿತ ಬದುಕಿನ ಬವಣೆಯನ್ನು ಎದುರಿಸುವ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
No one is capable of closing the books of karma. They would have to wipe off all the consequences of their previous actions which is impossible. So, one has to bear the burden of the consequences of past karma. Only advice can be that of 'patience'." - Mankutimma