Kagga Logo

Worship

494

498

494

ಹರಿಭಜಕರೊಳು ಭಯದಿನೊಗೆದುದೆನಿಬರ ಭಕುತಿ? ।
ವರದ ಮೇಲಣ ಭಕ್ತಿಯೆನಿಬರದು ನೋಡೆ? ॥
ಬರಿಯ ಸಂತೋಷದನುರಾಗರಸ ನಿಜಭಕ್ತಿ- ।
ಪರಮದಾಕರ್ಷೆಯದು - ಮಂಕುತಿಮ್ಮ ॥ ೪೯೪ ॥

ಹರಿಭಕ್ತರಲ್ಲಿ ‘ಭಯ’ದಿಂದ ‘ಭಕ್ತಿ’ ಯನ್ನು ತೋರುವವರು ಮತ್ತು ಬೇಡಿಕೆಗಳನ್ನು ಮುಂದಿಟ್ಟು, ಆ ಬೇಡಿಕೆಗಳು ಈಡೇರಲೆಂದು ಭಕ್ತಿ ತೋರುವವರು, ಮತ್ತು ‘ ನೀ ನನಗೆ ಇದ ಕೊಟ್ಟರೆ, ನಾ ನಿನಗೆ ಅದ ಕೊಡುವೆ ಎಂದು ಆ ದೈವದೊಂದಿಗೆ ವ್ಯಾಪಾರದ ಭಕ್ತಿ ತೋರುವವರೇ ಹೆಚ್ಚಾಗಿದ್ದಾರೆ. ಆದರೆ ಕೇವಲ ಆನಂದದ ಮತ್ತು ಅನುರಾಗದ ಭಾವದಿಂದ ‘ನಿರಪೇಕ್ಷಿ ‘ಯಾಗಿ ತೋರುವುದೇ ನಿಜವಾದ ಭಕ್ತಿ ಎಂದು ಅರುಹುತ್ತಾರೆ ನಮಗೆ ಈ ಮುಕ್ತಕದಲ್ಲಿ.

Among the devotees of the Lord, how many are driver by fear? How many have devotions towards boons and not God himself? It is real devotion when feeling of love and happiness is only sought from it. That is the attraction of God. - Mankutimma

495

ಅರುಣೊದಯಪ್ರಭೆಯ, ಗಿರಿಶೃಂಗದುನ್ನತಿಯ ।
ವರುಣಾಲಯಾಯತಿಯ ನಿರುಕಿಸಿದೊಡಹುದೇಂ? ॥
ಬೆರಗು, ಬರಿಬೆರಗು, ನುಡಿಗರಿದೆನಿಪ್ಪಾನಂದ ।
ಪರಮಪೂಜೆಯುಮಂತು - ಮಂಕುತಿಮ್ಮ ॥ ೪೯೫ ॥

ಮೂಡುತ್ತಿರುವ ಸೂರ್ಯನ ಬೆಳಕನ್ನು, ಮುಗಿಲನ್ನು ಮುಟ್ಟುವಂತೆ ನಿಂತಿರುವ ಗಿರಿಗಳ ಎತ್ತರವನ್ನು, ಅಳತೆಗೆ ಎಟುಕದ ಕಡಲ ವಿಸ್ತಾರವ ನೋಡಿದಾಗ ಅವುಗಳ ನಿಜ ಸೌಂದರ್ಯವು ನಮ್ಮನ್ನು ಬೆರಗಾಗಿಸಿ ನಮ್ಮಲ್ಲಿ ಮಾತಿಗೆ ಎಟುಕದಂತ ಒಂದು ಪ್ರಶಾಂತ,ಮೂಕ ಆದರೂ ಆನಂದದ ಭಾವವು ಬಂದು ನಿಲ್ಲುವುದಿಲ್ಲವೇ? ಹಾಗೆಯೇ ಪರಮಾತ್ಮನ ಪೂಜೆಯೂ ಆಗಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

When one watches the brilliance of sun rise, the heights of mountains and the vast expanse of the seas - what does he see/feel? Wonder, just wonder. Wonder that can not be described by words. Enjoying such a spectacle is a way we worship God. - Mankutimma

496

ಬೆರಗಾಗಿಪುವುವೆಲ್ಲ ಪಿರಿತನದ ನೋಟಗಳು ।
ಬೆರಗೆ, ಮೈಮರೆವೆ, ಸೊಲ್ಲಣಗುವುದೆ ಸೊಗಸು ॥
ಬೆರಗು ಚಿತ್ತವ ನುಂಗಲೊಗೆವ ಶಾಂತಿಯ ಕಾಂತಿ ।
ಪರಮನರ್ಚನೆಗೆ ವರ - ಮಂಕುತಿಮ್ಮ ॥ ೪೯೬ ॥

ಜಗತ್ಸೃಷ್ಟಿಯ ಹಿರಿದಾದ ನೋಟಗಳೆಲ್ಲ ನಮ್ಮನ್ನು ಬೆರಗಾಗಿಸುತ್ತವೆ. ಆ ಬೆರಗು ನಮ್ಮನ್ನು ಮೈಮರೆಯುವಂತೆ ಮಾಡಿದಾಗ ನಾವು ಮೂಕಸ್ಮಿತರಾಗುವುದೇ ಸೊಗಸು. ನಾವು ಹಾಗೆ ಬೆರಗಾದಾಗ ನಮ್ಮ ಮನಸ್ಸನ್ನು ಆವರಿಸುವ ಪ್ರಭೆಯ ಅಥವಾ ಕಾಂತಿಯ ಶಾಂತತೆಯೇ ನಮಗೆ ಆ ಪರಮಾತ್ಮನನ್ನು ಪೂಜಿಸಲು ಸಿಕ್ಕ ‘ವರ’ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.

All sights of magnanimity will cause wonder. It is this feeling of wonder, getting lost, feeling speechless that is pleasing. When our intellect is encompassed by this wonder, there is peace. The radiance of this peace is the boon by which we please the creator. - Mankutimma

497

ಸುತೆಯ ಪೋಷಿಸಿ ಬೆಳಸಿ, ಧನಕನಕದೊಡನವಳನ್- ।
ಇತರಗೃಹಕಿತ್ತು ನೀಂ ಕೇಳ್ವ ಮುಯ್ಯೇನು? ॥
ಪ್ರತಿಫಲವು ಬೇರೇಕೆ? ಸುಕೃತಕದು ತಾನೆ ಫಲ ।
ಹಿತ ಮನದ ಪಾಕಕದು - ಮಂಕುತಿಮ್ಮ ॥ ೪೯೭ ॥

ತನ್ನ ಮಗಳನ್ನು ಪೋಷಿಸಿ, ಬೆಳೆಸಿ, ದೊಡ್ದವಳನ್ನಾಗಿಸಿ, ಸೂಕ್ತ ವಯಸ್ಸಿನಲ್ಲಿ ಧನ ಕನಕಗಳ ಸಹಿತ ವಿಜೃಂಭಣೆಯಿಂದ ವಿವಾಹ ಮಾಡಿ ಅನ್ಯರ ಮನೆಗೆ ಕಳುಹಿಸಿಕೊಡುವಾಗ, ತಂದೆ ಪ್ರತಿಫಲವಾಗಿ ಅಪೇಕ್ಷೆ ಪಡುವುದೇನು? ಮಾಡಿದ ಕೆಲಸ ಸರಾಗವಾಗಿ ನಡೆದರೆ ಅದೇ ಒಳ್ಳೆಯ ಫಲವಲ್ಲವೇ? ಹಾಗೆಯೇ (ಪರಮಾತ್ಮನ ಪೂಜೆಯಿಂದ) ಮನಸ್ಸು ಹಿತವಾಗಿ ಪಕ್ವವಾದರೆ ಸಾಕಲ್ಲವೇ ಬೇರೇನು ಬೇಕು? ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

You bring up a daughter with lot of love and care. Then you give her away to a in-laws with a lot of money and gold. What do you expect in return? Nothing. What can you expect in return? Virtue its own reward. It is good for maturity of the mind. - Mankutimma

498

ಸಂಗೀತ ತಲೆದೂಗಿಪುದು, ಹೊಟ್ಟೆ ತುಂಬೀತೆ? ।
ತಂಗದಿರನೆಸಕ ಕಣ್ಗಮೃತ, ಕಣಜಕದೇಂ? ॥
ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ ।
ಪೊಂಗುವಾತ್ಮವೆ ಲಾಭ - ಮಂಕುತಿಮ್ಮ ॥ ೪೯೮ ॥

ಸಂಗೀತವನ್ನು ಆಲಿಸಿದರೆ ಮನಸ್ಸಿಗೆ ಸಂತೋಷವಾಗುತ್ತದೆ, ಹೊಟ್ಟೆ ತುಂಬುತ್ತದೆಯೇ? ಇಲ್ಲ, ಹುಣ್ಣಿಮೆಯ ಬೆಳದಿಂಗಳು ಕಣ್ಣುಗಳಿಗೆ ಹಿತವಾಗಿರುತ್ತದೆ, ಮನೆಗೆ ದವಸ ದಾನ್ಯ ತಂದೀತೆ? ಇಲ್ಲ, ಹಾಗಾಗಿ ಸುಕೃತವನ್ನು ಎಸಗುವಾಗ ವಸ್ತುರೂಪದ ಪ್ರತಿಫಲವನ್ನು ಅಪೇಕ್ಷಿಸಬೇಡ. ಅಂತಹ ಒಳ್ಳೆಯ ಕೆಲಸ ಮಾಡುವುದರಿಂದ, ಕೇವಲ ಆತ್ಮಾನಂದವನ್ನು ಪಡೆಯಬೇಕು ಎಂದು ಸೂಚನೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Music may make head nod, but can it fill the stomach? Cool light from the moon is pleasing on the eyes, but will the granary fill with that? But these are all wonderful things with in tangible benefits. Don't make it a transaction at a shop by weighing everything against profits. The enriching soul is the only benefit of those acts. - Mankutimma