Victory of humans over death
474
—
478
474
ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ ।
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ? ॥
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ? ।
ಬಿದ್ದ ಮನೆಯನು ಕಟ್ಟೊ - ಮಂಕುತಿಮ್ಮ ॥ ೪೭೪ ॥
ಕೊಳೆಯಾದ ಇಳೆಯನ್ನು ಮಳೆಯಿಂದ ಮತ್ತೆ ಮತ್ತೆ ತೊಳೆಯುವ ಆ ಆಕಾಶದಂತೆ, ಬೆಳೆಯನ್ನು ಕೊಯ್ದ ನಂತರವೂ ಮತ್ತೆ ಮತ್ತೆ ಬೆಳೆ ಬೆಳೆಯುವ ಈ ಧರೆಯಂತೆ, ಕೆಳಗೆ ಬಿದ್ದಿರುವುದನ್ನು ಎತ್ತಿ ನಿಲ್ಲಿಸುವುದೇ ಮಾನವನ ನಿರಂತರ ಕ್ಷಮತೆ. ಹಾಗಾಗಿ ಬಿದ್ದ ಮನೆಯನ್ನು ಎತ್ತಿ ಕಟ್ಟೋ ಎಂದು ಆದೇಶಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Man's immortality is in reconstructing that which has fallen down. We should not shy away from that responsibility. The sky cleans the earth again and again by pouring rain on earth tirelessly. An agriculture field does not refuse produce after the first harvest. Does it? You should always build the broken house back. - Mankutimma
475
ಗೌರವಿಸು ಜೀವನವ, ಗೌರವಿಸು ಚೇತನವ ।
ಆರದೋ ಜಗವೆಂದು ಭೇದವೆಣಿಸದಿರು ॥
ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ ।
ದಾರಿಯಾತ್ಮೊನ್ನತಿಗೆ - ಮಂಕುತಿಮ್ಮ ॥ ೪೭೫ ॥
ನಿನ್ನ ಜೀವನವನ್ನು ಗೌರವಿಸು, ಆ ಜೀವನಕ್ಕೆ ಮೂಲವಾದ ಚೇತನವನ್ನು ಗೌರವಿಸು. ಇದು ಯಾರದೋ ಜಗತ್ತು, ನಾನೇನೂ ಇಲ್ಲಿ ಶಾಶ್ವತವಾಗಿ ಇರುವುದಿಲ್ಲವಲ್ಲ ಎಂದು ಬದುಕನ್ನು ಗೌಣವೆಂದೆಣಿಸಬೇಡ. ಈ ಬದುಕಿನಲ್ಲಿ ನಾವು ಹೋರಾಡುವುದೇ ಸಮೃದ್ಧಿಗೋಸ್ಕರ. ಈ ಹೋರಾಟ ನಮಗೆ ಆತ್ಮೋನ್ನತಿಗೆ ದಾರಿಯಾಗಿದೆ ಎಂದು ಬಹಳ ಗಹನವಾದ ತತ್ವವನ್ನು ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ ಅರುಹಿದ್ದಾರೆ.
Respect life, respect the source of all energy. Don't be disinterested in this world assuming someone else is running it. Putting in hard work is the only path towards prosperity. It is also the path towards enrichment of your soul. - Mankutimma
476
ಜೀವನೋದ್ಯಮವೆಲ್ಲ ತೋಟದುದ್ಯೋಗವೆನು ।
ಭಾವಬುದ್ಧಿಗಳ ಕೃಷಿಯಿಂದೊಗೆದ ಫಲದಿಂ ॥
ತೀವುತಿರೆ ನಗೆ ಹೊಳಪು ಮೊಗಮೊಗದೊಳಂ ಜಗದಿ ।
ಸೇವೆಯದು ಬೊಮ್ಮಂಗೆ - ಮಂಕುತಿಮ್ಮ ॥ ೪೭೬ ॥
ಸಕಲ ಚರಾಚರಗಳ ಜಗತ್ತಿನ ಜೀವನವು ಆ ಪರಮಾತ್ಮನ ತೋಟ ಅಥವಾ ಉದ್ಯಾನವನ. ನಾವೆಲ್ಲಾ ಅವನು ಬೆಳೆಸಿದ ನಡೆದಾಡುವ ಗಿಡಗಳು. ನಮ್ಮ ಭಾವಗಳ ಮಂಥನದಿಂದ ಈ ಉದ್ಯಾನವನ್ನು ಕೃಷಿಗೈದಾಗ, ‘ಆನಂದ’ದ ರೂಪದಲ್ಲಿ ಸುಫಲ ಲಭ್ಯವಾಗಿ ಪ್ರತೀ ಜೀವಿಯ ಮುಖದಲ್ಲೂ ನಗೆ ಮತ್ತು ಸಂತೋಷದ ಹೊಳಪು ತುಂಬಿ ತುಳುಕ್ಕುತ್ತಿದ್ದರೆ, ಆ ಕೃಷಿಯೇ ನಾವೆಲ್ಲಾ ಮಾಡುವ ‘ಪರಮಾತ್ಮನ ಸೇವೆ’ ಯೆಂದಾಗುತ್ತದೆ ಎಂದು ಪರಮಾತ್ಮನ ಸೇವೆಯ ಮತ್ತೊಂದು ವಿಧಾನವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Consider all hard work we put in this world same as tending to a garden. If the fruits of our cultivation of feelings and emotions brings sparkle of smiles on many faces, then we can think we served God well. - Mankutimma
477
ಹೂವ ತಳೆದ ಗುಲಾಬಿಯಿಂದ ಮನಕಹುದೇನು? ।
ನೋವೋ? ಸಂತಸವೊ? ನೋಡಾಮುಳ್ಳು ಬಾಳ್ಗೆ ॥
ಹೂವೆ ದಿವ್ಯಕಿರೀಟವದುವೆ ಕಾಲಕಟಾಕ್ಷ ।
ಜೀವನದ ತಿರುಳಷ್ಟೆ - ಮಂಕುತಿಮ್ಮ ॥ ೪೭೭ ॥
ಸುಂದರವಾದ ಹೂವನ್ನು ತಳೆದ ಗುಲಾಬಿ ಗಿಡದಿಂದ ನಾವು ಅರಿಯುವುದು ಅಥವಾ ಅನುಭವಿಸುವುದು, ನೋವೋ ನಲಿವೋ ಸಂತಸವೋ?. ನೋಡಿ, ಗಿಡದ ಮುಳ್ಳನ್ನು ಬಾಳಿಗೆ ಹೋಲಿಸಿಕೊಂಡರೆ, ಗಿಡದ ಶಿಖರದಲ್ಲಿ ತಳೆಯುವ ಆ ಸುಂದರ ಹೂವನ್ನು ನಾವು ನಡೆದು ಬಂದ ಕಾಲವು ನಮಗೆ ಜೀವನದ ಅಂತ್ಯದಲ್ಲಿ ಕರುಣಿಸುವ ಶಾಂತಿ ನೆಮ್ಮದಿ ಅಥವಾ ಸುಖಕ್ಕೆ ಹೋಲಿಸಿಕೊಳ್ಳಬೇಕು. ಜೀವನದ ತಿರುಳು ಅಥವಾ ಸಾರವು ಅಷ್ಟೇ ಎಂದು ಜೀವನಾನುಭವವನ್ನು ನಾವು ಹೇಗೆ ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
What do you feel when you see a rose blooming in a plant? Do you feel pain? or pleasure? See the thorn also. Our life secret is also as simple as that. The rose the goal of life. The thorns are the only ways to attain it. - Mankutimma
478
ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ।
ಜಗಿದ ಮುಳ್ಳಿರಿತಗಳ ಸೈರಿಸೆ ಗುಲಾಬಿ ॥
ನಗುವುದೊಂದರೆನಿಮಿಷ ನಗಲು ಬಾಳ್ಮುಗಿಯುವುದು ।
ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ ॥ ೪೭೮ ॥
ಆ ಗುಲಾಬಿ ತೋಟದ ಮಾಲಿ, ನೆಲ ಅಗೆದು ಸಸಿಯ ನೆಟ್ಟು, ಅದಕ್ಕೆ ಗೊಬ್ಬರವ ಕೊಟ್ಟು ನೀರೆರೆದು, ಸೈರಣೆಯಿಂದ ಆ ಗಿಡದ ಮುಳ್ಳುಗಳಿಂದ ಚುಚ್ಚಿಸಿಕೊಂಡು, ಪ್ರೀತಿಯಿಂದ ಆ ಗಿಡವನ್ನು ಬೆಳೆಸಿದರೆ ಒಂದು ದಿನ ಹೂ ಬಿಟ್ಟು, ಅಲ್ಪಕಾಲವಾದರೂ ಜಗಕೆ ಸಂತಸವನ್ನು ಕೊಡುತ್ತಾ ನಲಿದಾಗ, ಮಾಲಿಯ ಅಷ್ಟೂ ದುಡಿತಕ್ಕೂ ಒಂದು ಸಾರ್ಥಕ್ಯದ ಭಾವ ಮೂಡುತ್ತದೆ, ಎಂದು ಜಗತ್ತಿನಲ್ಲಿ ‘ಆನಂದ’ವನ್ನು ಅನುಭವಿಸುವ ಪರಿಯ ಮತ್ತೊಂದು ಕೋನವನ್ನು ನಮಗೆ ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು, ನಮಗೆ ಈ ಮುಕ್ತಕದಲ್ಲಿ.
A gardener will dig, put manure, pour water and grow a rose plant. He will endure the pain caused by the piercing of the thorns. The rose bud smiles only for half a second. Its life ends after the smile. But that smile is worth all the effort. - Mankutimma