Life’s design
24
—
28
24
ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ? ।
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ॥
ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ? ।
ಧರುಮವೆಲ್ಲಿದರಲ್ಲಿ? - ಮಂಕುತಿಮ್ಮ ॥ ೨೪ ॥
ಮನುಷ್ಯರ ಬಯಕೆಗಳೇ ಈ ದೇವತೆಗಳಿಗೆ ತಂದೆ ತಾಯಿಗಳೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಹೌದಲ್ಲವೇ ಈ ವಿಶ್ವದ ಎಲ್ಲವನ್ನೂ ಸೃಷ್ಟಿಸಿ ನಡೆಸಿಕೊಂಡು ಹೋಗುವ ಆ ಪರಮಾತ್ಮನಾಗಿರುವಾಗ, ಮನುಷ್ಯರು ತಮ್ಮ ತಮ್ಮ ಸಣ್ಣ ಸಣ್ಣ ಬಯಕೆಗಳನ್ನು ಈಡೇರಿಸಿಕೊಳ್ಳಲು ಬೇರೆ ಬೇರ ದೇವತೆಗಳನ್ನು ಸೃಷ್ಟಿಸಿಕೊಂಡಿರುವುದರಿಂದ, ಅವರಿಗೆ ನಮ್ಮ ಬಯಕೆಗಳೇ ತಂದೆ ತಾಯಿಗಳ ಸ್ಥಾನದಲ್ಲಿರುವುದು ತತ್ಯವಲ್ಲವೇ? ಇದನ್ನೇ ಶ್ರೀ ಗುಂಡಪ್ಪನವರು ಹೇಳುತ್ತಾರೆ. ವಿದ್ಯೆಗೆ ಒಂದು ದೇವತೆ, ಹಣಕ್ಕೆ ಒಂದು ದೇವತೆ, ಮಳೆಗೆ ಒಂದು ದೇವತೆ, ಗಾಳಿಗೊಂದು ದೇವತೆ. ನಮಗೆ ಗಿಡ ಮರ ಬಳ್ಳಿಗಳೂ ನದಿ ಬೆಟ್ಟ ಕಾಡುಗಳೂ, ಎಲ್ಲವೂ ದೇವತಾ ಸ್ವರೂಪವೇ. ಹಾಗಾಗಿ ನಾವೇ ನಮ್ಮ ಕಲ್ಪನಾ ಶಕ್ತಿಯಿಂದ, ಆ ಪರಮಾತ್ಮನ ಸೃಷ್ಟಿ ಎಲ್ಲಕ್ಕೂ ದೇವತಾ ರೂಪವನ್ನು ಕೊಟ್ಟಿರುವುದರಿಂದ, ಮನುಷ್ಯರ ಬಯಕೆಗಳೇ ದೇವತೆಗಳಿಗೆ ತಂದೆ ತಾಯಿ ಸ್ಥಾನದಲ್ಲಿದ್ದಾವೆ, ಎಂದು ಗುಂಡಪ್ಪನವರು ಹೇಳುತ್ತಾರೆ.
Are Gods born out of human fears and desires? Or is human devotion only due to the arrogance (and tyranny) of Gods? Or are Gods troubling us in order to settle scores among themselves? Where is the concept of fairness here? - Mankutimma
25
ಜೀವಗತಿಗೊಂದು ರೇಖಾಲೇಖವಿರಬೇಕು ।
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ॥
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? ।
ಆವುದೀ ಜಗಕಾದಿ? - ಮಂಕುತಿಮ್ಮ ॥ ೨೫ ॥
ಒಂದು ಹಡಗನ್ನು ನಡೆಸಲು ನಾವಿಕನಿಗೆ ಒಂದು ದಿಕ್ಸೂಚಿ ಇರುತ್ತದೆ. ಸುತ್ತಲೂ ಸಮುದ್ರ ಮಧ್ಯದಲ್ಲಿ ಹಡಗು. ತನ್ನ ಗಮ್ಯದ ಕಡೆಗೆ ಹೋಗಲು ಆ ನಾವಿಕನಿಗೆ ದಿಕ್ಕನ್ನು ತೋರಲು ಒಂದು ದಿಕ್ಸೂಚಿ ಬೇಕು. ಆ ದಿಕ್ಸೂಚಿಯ ಸೂಚನೆಯಂತೆ ನಾವಿಕನು ಮುಂದುವರೆಯುತ್ತಾನೆ. ಆಗ ಹಡಗು ಆ ದಿಕ್ಕಿನಲ್ಲಿ ನೇರ ಹೋಗುತ್ತದೆ. ಆದರೆ ಜೀವನದ ಗತಿಗೆ ದಿಕ್ಸೂಚಿ ಯಾವುದು, ಇಲ್ಲ . ಅಂಥಹ ಒಂದು ದಿಕ್ಸೂಚಿ ಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಜೀವನದ ಗತಿಗೆ ಒಂದು ನೇರ ನಡೆ ಇಲ್ಲ. ಆ ನೇರ ನಡೆ ಬೇಕಾದರೆ ಒಂದು ನೇರ ಗೆರೆ ಬೇಕು ಎನ್ನುತ್ತಾರೆ. ಹೌದು ಇಡೀ ಬದುಕಿಗೆ ಒಂದು ನಿರ್ಧಿಷ್ಟ ಗತಿ ಅಥವಾ ಒಂದು ನಿರ್ಧಿಷ್ಟ ಯಾನದ ದಾರಿ ಇಲ್ಲ.
Just like a navigator (of a ship) uses a map (direction) and counts days to sail on a course our lives require such a blue-print. How can we understand (or come up with) the blueprint if we know neither the beginning nor the end? How did it all start? - Mankutimma
26
ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ ।
ಇಷ್ಟ ಮೊಹಕ ದಿವ್ಯಗುಣಗಳೊಂದು ಕಡೆ ॥
ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ ।
ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ ॥ ೨೬ ॥
ಆಹಾ ಎಂತಹ ವಿಷಯ! ಜಗತ್ತಿನ ಸೃಷ್ಟಿಯನ್ನು ವಿಶ್ಲೇಷಣೆ ಮಾಡುವಂಥಾ ವಿಚಾರ. ಈ ಸೃಷ್ಟಿಯಾಗುವುದಕ್ಕೆ ಉದ್ದೇಶ್ಯವು ಏನಿತ್ತು ಎಂದು ಯೋಚಿಸುತ್ತಾರೆ ಮಾನ್ಯ ಗುಂಡಪ್ಪನವರು. ಅದೊಂದು ಬ್ರಹ್ಮಗಂಟು. ಬಿಡಿಸಲಾಗದ್ದು. ಏಕೆಂದರೆ ಎಂತೆಂತಾ ಮಹಾ ಮಹಿಮರು ಈ ವಿಷಯದಲ್ಲಿ ಯೋಚನೆ ಜಿಜ್ಞಾಸೆ ತಪಸ್ಸು ಧ್ಯಾನ ಎಲ್ಲ ಮಾಡಿ ತಮಗೆ ತೋಚಿದ್ದನ್ನು ನಮಗೆ ಉಲ್ಲೇಖಿಸಿ ಕೊಟ್ಟಿದ್ದಾರೆ. ವೈಜ್ಞಾನಿಕ ಪರಿಭಾಷೆಗಳು ಬೇರೆ, ವೇದಾನ್ವಯ ಪರಿಭಾಷೆಗಳು ಬೇರೆ. ಸಿದ್ಧಾಂತಗಳು ಬೇರೆ , ನಂಬಿಕೆಗಳು ಬೇರೆ. ಆದರೆ ಎಲ್ಲೂ ಸಹಮತವಿಲ್ಲ. ನಾನು ಇಲ್ಲಿ ೯ನೆ ಕಗ್ಗಕ್ಕೆ ವಿವರಣೆ ನೀಡುವಾಗ ಕೆಲವು ಸೃಷ್ಟಿಯ ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಂಡಿಸಿದ್ದೆ. ಅಂದು ಇಡೀ ವಿಶ್ವದ ಸೂಕ್ಷ್ಮ ವಿಚಾರ ಮಂಡಿಸಿದ್ದೆ. ಎಷ್ಟು ಅಗಾಧ, ಎಷ್ಟು ವಿಸ್ತಾರ ನಮ್ಮ ಯೋಚನೆಗೆ ನಿಲುಕದಷ್ಟು, ಎಂದು.
What is the goal of this creation? It is so unclear and merger of opposites. All the things that are likeable, mesmerising and magical are on one side. Those that are painful, fearful and horrific are on the other side. But the demarkation is not clear. They are indistinguishable from each other. This thing created by the creator is very difficult to understand. - Mankutimma
27
ಧರೆಯ ಬದುಕೇನದರ ಗುರಿಯೇನು ಫಲವೇನು? ।
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ॥
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ।
ನರನು ಸಾಧಿಪುದೇನು? - ಮಂಕುತಿಮ್ಮ ॥ ೨೭ ॥
ಈ ಭೂಮಿಯಲ್ಲಿ ಜನಿಸಿದ ನಾವು ಮತ್ತು ನಮ್ಮ ಬದುಕು ಇದರ ಗುರಿಯೇನು? ಇದಕ್ಕಿರುವ ಪ್ರಯೋಜನವೇನು? ಸುಮ್ಮನೆ ಸುತ್ತಾಟ ಕೇವಲ ಪ್ರದಕ್ಷಿಣೆ ಬಂದ ಹಾಗೆ. ಕೇವಲ ಹೊಟ್ಟೆ ಪಾಡಿನ ಜೀವನ. ಪ್ರಾಣಿ ಪಕ್ಷಿಗಳಲ್ಲೂ ಸಹ ಈ ರೀತಿಯ ಹೊಟ್ಟೆ ಪಾಡಿನ ಜೀವನ ಮಾಡುತ್ತವೆ. ನಾವು ಅದಕ್ಕಿ೦ತ ಉತ್ತಮರೇನು ಅಲ್ಲ. ಇದೆಲ್ಲದರಿಂದ ಮನುಷ್ಯರು ಸಾಧಿಸುವುದದೇನು ? ಎಂದು ಈ ಕಗ್ಗದಲ್ಲಿ ಕೆಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ.
What is the meaning of life on this world? What is the aim? What are its fruits (benefit of enduring it)? Any action we do is just a round about to the ultimate goal. It is a constant struggle. We seem to come back to the proverbial square one again and again. Don't the animals and birds that lead a nomadic life wandering about for food very similar to us? Then what is the special achievement of mankind? - Mankutimma
28
ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ- ।
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ॥
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ ।
ತೋರದಾವುದು ದಿಟವೊ - ಮಂಕುತಿಮ್ಮ ॥ ೨೮ ॥
ಸಮಗ್ರ ಜೀವನದ ಚಿತ್ರದಲ್ಲಿ,ಈ ಜಗದ್ವ್ಯಾಪಾರಕ್ಕೆ, ಒಂದು ಬಾರಿ ಎನಗೆ, ಮಾನವರ ನಡುವಿನ ಕರುಣೆ, ವಿನೋದ ಸೌಂದರ್ಯ ಮುಂತಾದ ಸುಭಾವಗಳೇ ಕಾರಣವೆನಿಸುತ್ತದೆ. ಮತ್ತೆ ಕೆಲವು ಬಾರಿ ಜೀವನದ ಕಷ್ಟ ದುಃಖಗಳು, ಬಡತನ ಮತ್ತು ಬಡತನದಿಂದ ಕೂಡಿದ ಬದುಕಿನ ಕ್ಲಿಷ್ಟತೆಯಿಂದ ಕೂಡಿದ ಕಷ್ಟಗಳೇ ಕಾರಣವೆಂದು ಅನಿಸುತ್ತದೆ, ಇದು ಸತ್ಯವೋ ಅಥವಾ ಅದು ಸತ್ಯವೋ ಎಂದು ಅರಿಯದಾಗಿದೆ ಎಂದು ಒಂದು ಡೋಲಾಯಮಾನವಾದ ಭಾವನೆ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
There are two seeming truths about creation. One suggests that compassion, romance, beauty and taste is the reason why there is a creation after all. Another second it seems as if the struggle and the hard heartedness is what that drives the world. It is not possible to know which one is the absolute truth. - Mankutimma