Invisible commander
734
—
738
734
ಸೈನಕನು ನೀನು, ಸೇನಾಧಿಪತಿಯೆಲ್ಲಿಹನೊ! ।
ಆಣತಿಯ ಕಳುಹುತಿಹನದನು ನೀನರಿತು ॥
ಜಾಣಿನಧಟಿಂ ಪೋರು; ಸೋಲುಗೆಲುವವನೆಣಿಕೆ ।
ಕಾಣಿಸದನಾಳ್ಕೆಯದು - ಮಂಕುತಿಮ್ಮ ॥ ೭೩೪ ॥
ಈ ಜಗತ್ತಿನ ಬದುಕೇ ಒಂದು ರಣರಂಗ. ಅದರಲ್ಲಿ ನೀನೊಬ್ಬ ಯೋಧ. ನಿನಗೆ ಆಜ್ಞೆಗಳನ್ನೀವ ಸೇನಾಧಿಪತಿಯು ಎಲ್ಲಿಹನೋ ನೀನರಿಯೆ. ಅವನಿರುವಲ್ಲಿಂದಲೇ ತನ್ನ ಆಜ್ಞೆಗಳನ್ನು ಹೊರಡಿಸುತ್ತಾನೆ. ಆ ಆಜ್ಞೆಗಳನ್ನು ಅರ್ಥಮಾಡಿಕೊಂಡು, ಜಾಣತನ ಮತ್ತು ಪರಾಕ್ರಮದಿಂದ ಹೋರಾಡುವುದಷ್ಟೇ ನಿನ್ನ ಕರ್ತವ್ಯ. ಹೋರಾಟದಲ್ಲಾಗುವ ‘ಜಯಾಪಜಯ’ಗಳ ಲೆಕ್ಕಾಚಾರ ಅವನಿಗೆ ಸೇರಿದ್ದು. ನಮ್ಮ ಕಣ್ಣಿಗೆ ಕಾಣಿಸದ ಅವನ, ಆಳ್ವಿಕೆ ಇದು, ಎಂದು ಹೇಳುತ್ತಾ ಬಂಧನವಿಲ್ಲದೆ, ಅಂಟದೆ ನಮ್ಮ ಕರ್ತವ್ಯ ಪಾಲನೆಯ ಪರಿಯನ್ನು ನಮಗುಪದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
You are a soldier. We don't know where the commander is! He is sending instructions. We have to understand and execute the orders wisely and courageously. Victory or defeat is not ours, but his. Life is the rule of the invisible commander. - Mankutimma
735
ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ ।
ಆಯವದರಿಂ ಭಟನ ಸತ್ತ್ವಶಿಕ್ಷಣಕೆ ॥
ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ ।
ಶ್ರೇಯಸಿಗೆ ಸೋಪಾನ - ಮಂಕುತಿಮ್ಮ ॥ ೭೩೫ ॥
ಯುದ್ಧದಲ್ಲಿ ಹೋರಾಡುವ ಸೈನಿಕನಿಗೆ, ರಣರಂಗವು, ಕಲಿಕೆಗೆ ಮತ್ತು ಸತ್ವವರ್ಧನೆಗೆ ಒಂದು ಸೂಕ್ತ ಸ್ಥಳ(ಆಯ). ಆ ರಣದ ಸೋಲುಗೆಲುವಿನ ಲೆಕ್ಕಾಚಾರ ಆ ರಣದ ನಾಯಕನಿಗಿರಲಿ ಎಂದು ಹೇಳುತ್ತಾ ಬದುಕಿನ ಹೋರಾಟವನ್ನೂ ಸಹ ಸೋಲುಗೆಲುವುಗಳ ಚಿಂತೆಯಿಲ್ಲದೆ ಹೋರಾಡಿ, ನಮ್ಮ ಅನುಭವದಿಂದ ಅಂತಃಸತ್ವವನ್ನು ವರ್ಧಿಸಿಕೊಳ್ಳಬೇಕು, ಅದೇ ವ್ಯಕ್ತಿಯ ಶ್ರೇಯಸ್ಸಿಗೆ ಮೆಟ್ಟಿಲು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Let the worry of keeping counts of victories and defeat be left to the leader (God). The only outcome of the process should be your training for the battle. The practice alone is good enough outcome and it will lead to enrichment of your life. - Mankutimma
736
ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ ।
ಆಯಸಂಬಡಿಸದವೊಲಂತರಾತ್ಮನನು ॥
ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ ।
ಆಯುವನು ಸಾಗಿಸೆಲೊ - ಮಂಕುತಿಮ್ಮ ॥ ೭೩೬ ॥
ಕರ್ತವ್ಯವನ್ನು ಮಾಡುತ್ತಾ ನಮ್ಮದೇ ಮನಸ್ಸನ್ನು ಸಂತೈಸುತ್ತಾ ಆತ್ಮವನ್ನು ಆಯಾಸಗೊಳಿಸದಂತೆ, ಜಗತ್ತಿನ ಮಾಯೆಯೊಡನೆ ಆಟವಾಡುತ್ತಾ, ಪರಮಾತ್ಮನನ್ನು ಭಜಿಸುತ್ತಾ ನಿನ್ನ ಬದುಕನ್ನು ಸಾಗಿಸು ಎಂದು ನಾವು ಜಗತ್ತಿನಲ್ಲಿ ಹೇಗಿರಬೇಕು ಎನ್ನುವುದನ್ನು ಬಹಳ ಸೂಕ್ತವಾಗಿ ಆದೇಶ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
Do your duty. Console your mind. Don't let your inner conscience get anxious. Play (revel) with the grand illusion of this world. Always keep God in mind. You must get through your life like this. - Mankutimma
737
ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ ।
ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ॥
ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ ।
ಹೊಂದು ವಿಶ್ವಾತ್ಮತೆಯ - ಮಂಕುತಿಮ್ಮ ॥ ೭೩೭ ॥
‘ಎಂದಿಗಾದರೂ ನಿನ್ನ ಪೂರ್ವ ಕರ್ಮಗಳ ಲೆಕ್ಕಾಚಾರವನ್ನು ನೋಡಿ ಮುಗಿಸಬೇಕೆಂದೆನಿಸಿದರೆ, ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯನ್ನು ಇಂದೇ ಇಡು. ಹೃದಯ ವಿಸ್ತಾರದಿಂದ ಅನ್ಯರನ್ನು ಎಟುಕಿಸಿಕೋ. ಜಗತಾತ್ಮತೆಯನ್ನು ಹೊಂದು, ಅನುಭವಿಸು ಎಂದು, ಬದುಕಿನ ಭಾರವನ್ನು ಕಳೆದುಕೊಂಡು, ವೈಶಾಲ್ಯತುಂಬಿದ ಜೀವನದ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If there is some debt from previous actions (from any births) that is yet to be repaid, then make a start right now. Embrace those who keep you away by expanding your self-consciousness. There by you will expand yourself and realize that the whole world is one. - Mankutimma
738
ತನಗೆ ಬಾರದ ಲಾಭ ತನಯಂಗೆ ಬಂದಾಗ ।
ಜನಕನ್ ಅದು ತನದೆಂದು ಸಂತಸಿಪ ತೆರದಿ ॥
ಜನದೊಳಾರ್ಗಾವ ಸೊಗವಾದೊಡಂ ತನದೆನ್ನು- ।
ತನುಭವಿಪನೋ ಜ್ಞಾನಿ - ಮಂಕುತಿಮ್ಮ ॥ ೭೩೮ ॥
ಜೀವನದಲ್ಲಿ ನಾನು ಪಡೆಯಲಾಗದ್ದನ್ನು ನನ್ನ ಮಗ(ಳು)ಪಡೆದರೆ ಸಂತೋಷಿಸುವ ತಂದೆಯಂತೆ, ಜಗತ್ತಿನಲ್ಲಿ, ನಾವು ಬಯಸಿ, ನಮಗೆ ಸಿಗದಿದ್ದದ್ದು ಬೇರೆ ಯಾರಿಗಾದರೂ ದಕ್ಕಿ ಅದು ಅವರ ಸಂತೋಷಕ್ಕೆ ಕಾರಣವಾದರೆ ಆ ಸಂತೋಷವನ್ನು ತನ್ನ ಸಂತೋಷವೆಂದು ಸಂಭ್ರಮಿಸುವವನೆ ಜ್ಞಾನಿ ಎಂದು ಉಲ್ಲೇಖಮಾಡಿದ್ದಾರೆ ಈ ಮುಕ್ತಕದಲ್ಲಿ.
If a father misses a fortune and sees his son get it, he will rejoice it just as much. A wise man will do just the same for any joy experienced by any one in this world. That is the secret of his happiness. - Mankutimma