Kagga Logo

Hundred-string dance

334

338

334

ಓರೋರ್ವನಿಚ್ಛೆಗುಣವೊಂದೊಂದು ಬಗೆ ಜಗದಿ ।
ಭಾರಮೋರೊರ್ವನಿಂಗೊಂದೊಂದು ತೆರದಿ ॥
ದಾರಗಳಿನವರ ವಿಧಿ ಪಿಡಿದು ಕುಣಿದಾಡಿಸಲು ।
ನೂರುಜಡೆಕೋಲಾಟ - ಮಂಕುತಿಮ್ಮ ॥ ೩೩೪ ॥

ಜಗತ್ತಿನಲ್ಲಿ ಒಬ್ಬೊಬ್ಬನ ಇಚ್ಚೆಯ ಗುಣ ಒಂದೊಂದು ರೀತಿ ಮತ್ತು ಅವನವನ ಕಾರ್ಯದ ಭಾರ ಒಬ್ಬೊಬ್ಬನಿಗೆ ಒಂದೊಂದು ರೀತಿ . ಎಲ್ಲರ ಸೂತ್ರಗಳನ್ನೂ ವಿಧಿಯು ಹಿಡಿದು ಕುಣಿದಾಡಿಸಲು,ಈ ಜಗತ್ತೇ ಒಂದು" ನೂರು ಜಡೆ ಕೋಲಾಟ" ವಾಡುವಂತಹ ಚಿತ್ರಣವನ್ನು ಬಿಂಬಿಸುತ್ತದೆ ಎಂಬುದೆ ಈ ಮುಕ್ತಕದ ಹೂರಣ.

"Each one has his own desires and his own qualities. Each one has to deal with his own burdens in his own way. Providence is playing a careful game of Kolu Jade of hundred strings by controlling all of us." - Mankutimma [Translator' note: The game involves tying one end of all the strings very high up. Each one will hold one end and dance to choreographed steps so that the strings can be twisted and untwisted without making a knot.]

335

ಆವ ಜನ್ಮದ ಋಣವೊ, ಆವ ಕರ್ಮದ ಕಣವೊ ।
ಮಾವಾಗಿ ಬೇವಾಗಿ ಸಂಸಾರ ವನದಿ ॥
ಜೀವಕೀಂಟಿಪುವು ಮಾದಕದ ರಸಪಾನಗಳ ।
ಭಾವಜ್ವರಂಗಳವು - ಮಂಕುತಿಮ್ಮ ॥ ೩೩೫ ॥

ಹಲವಾರು ಪೂರ್ವ ಜನ್ಮಗಳ ವಾಸನೆಗಳಿಗೆ ಅನುಸಾರವಾಗಿ ನಮಗೆ ಈ ಜನ್ಮ. ( ಇದನ್ನು ನಂಬದವರೂ ಇದ್ದಾರೆ). ಹಿಂದಿನಿಂದ ಹೊತ್ತು ತಂದ ಆ ವಾಸನೆ ಮತ್ತು ಕರ್ಮಗಳನ್ನು ಪೂರೈಸಿಕೊಳ್ಳಲು ಈ ಜನ್ಮ ಮತ್ತು ಇಲ್ಲಿನ ಕರ್ಮ. ಇಲ್ಲಿ ಮಾವಿನ ಸಿಹಿಯನ್ನೂ ಸವಿಯಬೇಕು. ಬೇವಿನ ಕಹಿಯನ್ನೂ ಸವಿಯಬೇಕು. ಇವೆರಡರ ಸಮ್ಮಿಶ್ರ ‘ರಸಪಾನ’ವನ್ನು ನಮಗೆ ವಿಧಿ ಮಾಡಿಸುತ್ತಿದೆ. ನಮ್ಮ ಭಾವೋದ್ವೇಗಗಳೇ ನಮಗೆ ತಾಪವನ್ನು ಹೆಚ್ಚಿಸುತ್ತಾ "ಭಾವ ಜ್ವರ’ವನ್ನು ಉಂಟುಮಾಡುತ್ತದೆ ಎಂದು, ಬದುಕಿನಲ್ಲಿ ನಮಗೆ ದೊರೆಯುವ ಸಿಹಿ-ಕಹಿಗಳ ಸಮ್ಮಿಶ್ರ ಅನುಭವಗಳನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"Left over karmic debt from some older birth, consequences of previous actions come back to haunt us. They come as mango or neem (sweet or bitter) in the forest of this world. Providence makes a strong potion of those fruits and make people drink it and induce a fever of emotions." - Mankutimma

336

ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆಯೇಂ? ।
ಅನ್ಯಶಕ್ತಿಗಳೆನಿತೊ ಬೆರೆತಿರುವುವಲ್ಲಿ ॥
ಅನ್ನವಿಡುವರು, ತಿಳಿವನೀವರ್, ಒಡನಾಡುವರು ।
ನಿನ್ನ ಬಾಳ್ಗಿವರಿರರೆ? - ಮಂಕುತಿಮ್ಮ ॥ ೩೩೬ ॥

ನಿನ್ನ ಬೆಳವಣಿಗೆಗೆ ಅನ್ಯರ ಶಕ್ತಿಗಳೆಷ್ಟೋ ಪೂರಕವಾಗಿ ಬೆರೆತಿರುವಾಗ ನಿನ್ನ ಬದುಕು ಕೇವಲ ನಿನ್ನಿಂದಲೇ ರೂಪುಗೊಂಡದ್ದೇನು? ನಿನಗೆ ಅನ್ನವಿಟ್ಟವರು, ಅರಿವನಿತ್ತವರು ಮತ್ತು ನಿನ್ನ ಒಡನಾಡಿಗಳು, ಈ ಎಲ್ಲರೂ ಒತ್ತಾಸೆಯಿಂದ ನಿನ್ನ ಬಾಳಲ್ಲಿ ಇರುವಾಗ, " ನಾನು ಸ್ವತಂತ್ರನಾಗಿ ಬೆಳೆದಿದ್ದೇನೆ" ಎಂದು ನೀ ತಿಳಿಯಬಾರದು ಎಂದು, ಒಬ್ಬ ವ್ಯಕ್ತಿಯ ಬಾಳ ವಿಕಸನದ ಪರಿಯನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"Do you think your whole life is self made? There are so many forces that have got together to shape your present. People who have given you food, others who have advised you, some others who just gave you company - have these people not been a part of your making?" - Mankutimma

337

ಅನಿಲಗುಣ ಭೂಗುಣಗಳಿಂ ಸಸ್ಯಧಾನ್ಯಗುಣ ।
ತನುಗುಣಗಳನ್ನದಿಂ, ಮನದ ಗುಣ ತನುವಿಂ ॥
ಜನಪದವಿಧಂಗಳಿಂತಾಗಿಹುವು ಸೃಷ್ಟಿಯನೆ ।
ಮನುವೊಬ್ಬ, ಜನತೆ ಶತ - ಮಂಕುತಿಮ್ಮ ॥ ೩೩೭ ॥

ಬೀಸುವ ಗಾಳಿ ಮತ್ತು ಅದರೊಳಗಿನ ಅನಿಲಗಳ ಗುಣಗಳು ಮತ್ತು ಅಲ್ಲಿನ ಭೂಮಿಯ ಗುಣಕ್ಕೆ ಅನುಗುಣವಾಗಿ,ಆ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಗುಣ, ತಿನ್ನವ ಅನ್ನದ ಗುಣದಿಂದ ದೇಹದ ಗುಣ, ದೇಹದ ಗುಣದಂತೆ ಮನದ ಗುಣ, ಹೀಗೆ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ರೀತಿಯ ಜನಪದ. ಎಲ್ಲರೂ ಮನುಷ್ಯರೇ ಆದರೂ ಜನಾಂಗಗಳು ನೂರಾರಾಗಿ ರೂಪುಗೊಂಡಿವೆ ಈ ಜಗತ್ತಿನಲ್ಲಿ, ಎಂಬುದೇ ಶ್ರೀ ಗುಂಡಪ್ಪನವರ ಈ ಮುಕ್ತಕದ ಹೂರಣ.

"Air and earth are the basic qualities that get into the plants and cereals. Our body follows the qualities of what we eat. Mind follows the body. This leads to varieties in population. All are same at a human level, but differ at a group level due to their habits." - Mankutimma

338

ಓರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ? ।
ನೂರ್ವರಣಗಿಹರು ನಿನ್ನಾತ್ಮ ಕೋಶದಲಿ ॥
ಪೂರ್ವಿಕರು, ಜತೆಯವರು, ಬಂಧುಸಖಶತ್ರುಗಳು ।
ಸರ್ವರಿಂ ನಿನ್ನ ಗುಣ - ಮಂಕುತಿಮ್ಮ ॥ ೩೩೮ ॥

‘ನಾನು’ ಒಬ್ಬನೇ, ಒಬ್ಬಂಟಿ ‘ನನ್ನಿಂದಲೇ ನಾನು’ ಎಂದು ನೀ ತಿಳಿಯಬೇಡ. ನಿನ್ನ ಭಾವಗಳಲ್ಲಿ, ಯೋಚನೆಗಳಲ್ಲಿ, ಗುಣಗಳಲ್ಲಿ ಮತ್ತು ನಿನ್ನ ಅಂತರಾತ್ಮದಲ್ಲಿ ನಿನ್ನ ಪೂರ್ವಜರ, ಸ್ನೇಹಿತರ, ಬಂಧುಗಳ, ಸನ್ನಿಹಿತರ ಮತ್ತು ನಿನ್ನ ಶತ್ರುಗಳ, ಹೀಗೆ ಎಲ್ಲರ ಪ್ರಭಾವ ಆಗಿದೆ. ನಿನ್ನ ಗುಣಮತ್ತು ಸ್ವಭಾವವು ನೀ ಸಂಪರ್ಕಕ್ಕೆ ಬಂದ ಎಲ್ಲರಿಂದ ಆಗಿದೆ, ಎಂದು ಒಬ್ಬ ವ್ಯಕ್ತಿಯ ರೂಪುಗೊಳ್ಳುವಿಕೆಯನ್ನು ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"Individuality is a myth. How can you think about yourself as a single person? There are traces of hundred (many) people in this shell that you call as "me". Your ancestors, family, relatives, friends and enemies are all part of what you are. Your qualities are derived (influenced) by all of them." - Mankutimma