Humans and nature
859
—
862
859
ಪ್ರಕೃತಿಯನವರತ ಮನುಜನ ತಿದ್ದುತಿರುವಂತೆ ।
ವಿಕೃತಿಗೊಳಿಸುವನವನುಮ್ ಆಕೆಯಂಗಗಳ ॥
ಭೂಕೃಷಿಕ ರಸತಂತ್ರಿ ಶಿಲ್ಪಿ ವಾಹನಯಂತ್ರಿ ।
ವ್ಯಾಕೃತಿಸರೇನವಳ? - ಮಂಕುತಿಮ್ಮ ॥ ೮೫೯ ॥
ಪ್ರಕೃತಿ ನಿರಂತರವಾಗಿ ಮನುಷ್ಯನನ್ನು ತಿದ್ದುತ್ತಿರುವಂತೆಯೇ, ಮನುಷ್ಯ ಪ್ರಕೃತಿಯನ್ನು ವಿರೂಪಗೊಳಿಸುತ್ತಾನೆ. ಭೂಮಿಯನ್ನು ಕೃಷಿ ಮಾಡುವವನು, ಭೂ ಗರ್ಭದಿಂದ ರಾಸಾಯನಿಕಗಳನ್ನು, ಅದಿರುಗಳನ್ನು ಶೋಧಿಸುವವನು, ಲೋಹ ಮತ್ತು ಕಲ್ಲುಗಳಿಂದ ಶಿಲ್ಪಗಳನ್ನು ಮಾಡುವವನು, ತನ್ನ ಯಾತ್ರೆಗಾಗಿ ವಾಹನಗಳನ್ನು ತಯಾರುಮಾಡುವವನು ಎಲ್ಲರೂ ಈ ಪ್ರಕೃತಿಯನ್ನು ವಿಕೃತ ಗೊಳಿಸುವುದಿಲ್ಲವೇನು? ಎಂದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಪರಸ್ಪರ ಸಂಬಂಧವನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Nature always exerts enough force to correct man's course. On his part, man always tries to shape nature to his advantage/liking. A farmer, a metallurgist, a sculptor, an automobile engineer - Aren't they all exerting force to change nature?" - Mankutimma
860
ಸೃಷ್ಟಿ ಚೋದನೆಗಳಿಂ ನರನೊಳಿಷ್ಟಗಳುದಯ- ।
ವಿಷ್ಟಸಿದ್ದಿಗೆ ಯಂತ್ರತಂತ್ರಗಳ ಯುಕ್ತಿ ॥
ತ್ವಷ್ಟೃಕುಶಲದೆ ಸೃಷ್ಟಿ ವಿಕೃತಿ; ಇಂತನ್ಯೋನ್ಯ ।
ಸ್ಪೃಷ್ಟರ್ ಪ್ರಕೃತಿ ನರರು - ಮಂಕುತಿಮ್ಮ ॥ ೮೬೦ ॥
ಮನುಷ್ಯನ ಮನಸ್ಸಿನಲ್ಲಿ ಉದ್ಭವವಾಗುವ ಆಸೆಗಳು ಸೃಷ್ಟಿಯ ಪ್ರೇರಣೆ ಮತ್ತು ಪ್ರಚೋದನೆಯಿಂದಲೇ ಆಗುತ್ತದೆ. ಹಾಗೆ ಉದ್ಭವವಾದ ಅವನ ಇಷ್ಟಗಳನ್ನು ಪೂರೈಸಿಕೊಳ್ಳಲು ಸಾಧನಗಳನ್ನೂ ಪ್ರಕೃತಿಯೇ ನಿರ್ಮಿಸಿದೆ. ಆ ಸಾಧನಗಳನ್ನು ಉಪಯೋಗಿಸಿಕೊಂಡು ಮನುಷ್ಯ, ತಂತ್ರ ಮತ್ತು ಯುಕ್ತಿಗಳಿಂದ ತನ್ನ ಇಷ್ಟಗಳನ್ನು ಪೂರೈಸಿಕೊಳ್ಳುತ್ತಾನೆ. ಹೀಗೆ ಸೃಷ್ಟಿಕರ್ತನ ಕುಶಲತೆಯಿಂದಲೇ ಮಾನವನ ಮೂಲಕ ಸೃಷ್ಟಿ ವಿಕೃತಗೊಳ್ಳುತ್ತದೆ. ಹೀಗೆ ಪ್ರಕೃತಿ ಮತ್ತು ಮಾನವರ ಸಂಬಂಧ ಅನ್ಯೋನ್ಯವಾಗಿದೆ ಎಂದು ಮನುಷ್ಯ ಮತ್ತು ಪ್ರಕೃತಿಯ ಸಂಬಂಧವನ್ನು ಗುಂಡಪ್ಪನವರು ಈ ಮುಕ್ತಕದಲ್ಲಿ ಉಲ್ಲೇಖಿಸಿದ್ದಾರೆ .
"nature provokes man with desires. To satisfy this desire, he creates machines and mechanisms with his intellect. By the grace of this divine sculptor (through his energy residing in man) nature is altered now and then. This leads to the repeat of the cycle. Nature and mankind thus have an symbiotic relation." - Mankutimma
861
ದಿವ್ಯ ಚರಿತಂಗಳ ಪ್ರತ್ಯುಕ್ತಿ ನರಚರಿತೆ ।
ಕಾವ್ಯ ವಿಜ್ಞಾನಗಳ್ ನಿಗಮಾನುಸರಗಳ್ ॥
ನವ್ಯಸಂಪದವಾರ್ಷಸಂಪದುದ್ಧೃತವಿಂತು ।
ಸವ್ಯಪೇಕ್ಷಗಳುಭಯ - ಮಂಕುತಿಮ್ಮ ॥ ೮೬೧ ॥
ಇಂದಿನ ಮನುಷ್ಯರ ಜೀವನ ಹಿಂದಿನ ದಿವ್ಯಪುರುಷರ ಮಹೋನ್ನತವಾದ ನಡವಳಿಕೆಯ ಪ್ರತಿಬಿಂಬದಂತಿದೆ. ಇಂದಿನ ಕಾವ್ಯ ಮೀಮಾಂಸೆಗಳು ನಿಗಮವನ್ನು ಅನುಸರಿಸಿಯೇ ಬರೆಯಲ್ಪಟ್ಟಿದೆ . ಇಂದಿನ ಸಕಲ ಸಂಪತ್ತೂ ಋಷಿಮುನಿಗಳು ಮತ್ತು ನಮ್ಮ ಪೂರ್ವಜರ ಬದುಕಿನ ಮೇಲೆ ಸಮಗ್ರವಾಗಿ ಬೆಳೆದು ನಿಂತಿದೆ. ಹೀಗೆ ನವೀನ ಮತ್ತು ಪುರಾತನಗಳೆರಡೂ ಪರಸ್ಪರಾಧಾರಪಟ್ಟಿವೆ ಎಂದು ಜಗತ್ತಿನಲ್ಲಿ ಬದಲಾಗುತ್ತಿರುವ ಸ್ಥಿತಿಯನ್ನು, ಮಾನ್ಯ ಗುಂಡಪ್ಪನವರು ವಿಶ್ಲೇಷಿಸಿದ್ದಾರೆ, ಈ ಮುಕ್ತಕದಲ್ಲಿ.
"Human story is nothing more than a retelling of the past. Poetry and Science are following the same rules of the universe. New culture is only an excerpt of the old ones. The new and old grow depending on each other. The old needs the new to keep themselves alive and the new needs old to take form." - Mankutimma
862
ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ ।
ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ॥
ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ ।
ಸರಿ ಲೋಕಬಾಂಧವ್ಯ - ಮಂಕುತಿಮ್ಮ ॥ ೮೬೨ ॥
ಇರುವುದರಲ್ಲಿ ಆದಷ್ಟು ಆನಂದವನ್ನು ಪಡೆಯಲು ಮೊದಲು, ಇಹಕ್ಕೆ ಎಂದರೆ, ಪ್ರಪಂಚವನ್ನು ಆವರಿಸಿಕೊಂಡಿರುವ ಪರವನ್ನು ಅರಿಯುವುದು ಅವಶ್ಯಕ. ಪರಮಾರ್ಥದ ಲೆಕ್ಕಾಚಾರಗಳಿಂದ ನಮ್ಮ ಈ ಜಗತ್ತಿನ ಬಾಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಪಟ್ಟರೆ, ನಮ್ಮ ಮತ್ತು ಈ ಲೋಕದ ಭಾಂಧವ್ಯದ ಸ್ವರೂಪ ನಮಗೆ ಅರ್ಥವಾಗುತ್ತದೆ ಎಂದು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"If you seek to find happiness in whatever state you are in - then you must first understand that everything here has greater meaning in the context of the universe. Once you start evaluating the profits and losses of this world on an absolute scale of the universe, you will be able to achieve balance in life in this world." - Mankutimma