Kagga Logo

Harmony

808

813

808

ಚಿರ ಶಿಕ್ಷೆಯಿಂ ನಿನಗೆ ಸರ್ವಾತ್ಮತಾಭ್ಯಾಸ ।
ಸರಳ ಸಹಜವದಹುದು ಮೂಗಿನುಸಿರವೊಲು ॥
ಪರನಿಯತಿಯಿರದು ಸ್ವತಸಿದ್ಧ ನಿಯತಿಯಿರೆ ।
ಹೊರಸಡಿಲಕೊಳಹಿಡಿತ - ಮಂಕುತಿಮ್ಮ ॥ ೮೦೮ ॥

ಕಾಣುವ ಎಲ್ಲೆಲ್ಲೂ ಮತ್ತು ಕಾಣುವ ಎಲ್ಲದರಲ್ಲೂ ಆ ಪರಬ್ರಹ್ಮವಸ್ತುವನ್ನೇ ಕಾಣುವ ಅಭ್ಯಾಸವಾಗಬೇಕಾದರೆ ಮನಸ್ಸು ಬುದ್ಧಿಗಳಿಗೆ ನಿರಂತರ ಶಿಕ್ಷಣವಾಗಬೇಕು. ಸಹಜವಾದ ನಮ್ಮ ಉಸಿರಾಟದಂತೆ ಆ ಭಾವ ನಮ್ಮಲ್ಲಿ ಮೂಡಬೇಕು. ಇದಕ್ಕೆ ಹೊರಗಿನ ನಿಯಮಗಳಾವುದೂ ಇರುವುದಿಲ್ಲ, ಅದು ಸ್ವತಃ ಅಭ್ಯಾಸದಿಂದ ತನ್ನಲ್ಲಿ ತಾನೇ ಕಂಡುಕೊಂಡ ಸತ್ಯವಾಗಬೇಕು. ಅಂತಹ ಸ್ಥಿತಿ ತಲುಪಲು ಹೊರಗೆ ಸಹಜವಾಗಿ ಎಲ್ಲರಂತೆಯೇ ಇದ್ದರೂ, ಒಳಗೆ ಮನಸ್ಸುಬುದ್ಧಿಗಳನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರಬೇಕು, ಎನ್ನುವುದೇ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.

"To be able to treat everything in this world as if his own is a tough exercise. It has to be practiced tirelessly. Once mastered it is as simple as breathing. Once your inner self is disciplined, there is no need for any external forces to impose rules. To be free and flexible outside, the inside must be disciplined and strong." - Mankutimma

809

ದ್ವೈತವೇನದ್ವೈತವೇನಾತ್ಮದರ್ಶನಿಗೆ? ।
ಶ್ರೌತಾದಿವಿಧಿಯೇನು? ತಪನಿಯಮವೇನು? ॥
ನೀತಿ ಸರ್ವಾತ್ಮಮತಿಯದರಿನಮಿತ ಪ್ರೀತಿ ।
ಭೀತಿಯಿಲ್ಲದನವನು - ಮಂಕುತಿಮ್ಮ ॥ ೮೦೯ ॥

ಆತ್ಮದರ್ಶನವಾದವನಿಗೆ ‘ದ್ವೈತ’ ಮತ್ತು ಅದ್ವೈತದಿಂದ ಏನಾಗಬೇಕು?. ಶ್ರುತಿಗಳು ವಿಧಿಸಿರುವ ನಿಯಮಗಳ ಪಾಲನೆ, ತಪಸ್ಸು ಮುಂತಾದವುಗಳನ್ನು ಅವನು ಮಾಡಬೇಕೆಂದಿಲ್ಲ. ಅವನಿಗೆ ಜಗತ್ತಿನಲ್ಲೆಲ್ಲಾ ಪರಮಾತ್ಮನ ಮತ್ತು ಪರತತ್ವದ ದರ್ಶನವಾಗುತ್ತಿರುವಾಗ ಅದರಿಂದ ಎಲ್ಲರಲ್ಲೂಅಮಿತವಾದ ಪ್ರೀತಿಯನ್ನು ಹೊಂದಿರುತ್ತಾನಾದ್ದರಿಂದ ಅವನು ನಿರ್ಭೀತನಾಗಿರುತ್ತಾನೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"For a person who treats the whole of creation as himself, there is no fear. He has unlimited love to give to the world. He is a realized soul. He does not (need not) care about various philosophies of duality or singularity, about rituals and penances." - Mankutimma

810

ಬರಿಭಕ್ತಿ ಬರಿಕರ್ಮ ಬರಿತರ್ಕ ದೊರಕಿಸದು ।
ಪರಮಾತ್ಮ ದರ್ಶನವ; ಬೇಕದಕೆ ತಪಸು ॥
ಪರಿಪೂರ್ಣ ಜೀವನಾನುಭವತಾಪದಿ ಮತಿಯು ।
ಪರಿಪಕ್ವವಾಗಲದು - ಮಂಕುತಿಮ್ಮ ॥ ೮೧೦ ॥

ಕೇವಲ ಭಕ್ತಿ, ಕರ್ಮ ಅಥವಾ ತರ್ಕದಿಂದ ಪರಮಾತ್ಮ ದರ್ಶನವಾಗುವುದಿಲ್ಲ. ಅದಕ್ಕೆ ತಪಸ್ಸು ಬೇಕು, ಜೀವನದ ಪರಿಪೂರ್ಣ ಅನುಭವದ ಬೇಗೆಯಲ್ಲಿ ಬೆಂದು ಹೊರಬಂದರೆ ಆಗ ನಮ್ಮ ಬುದ್ಧಿ ಪಕ್ವವಾಗುತ್ತದೆ ಎಂದು, ಪರತತ್ವ ದರ್ಶನಕ್ಕೆ ಅಗತ್ಯವಾಗಿ ಆಗಬೇಕಾದ ಸಂಸ್ಕಾರದ ಬಗ್ಗೆ ನುಡಿದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"Devotion, actions, logic - any of these alone is not enough to get the full picture of the universal truth. It requires a lot of penance. It requires the mind to be subject to wide range of experiences throughout life. Only then will the mind be purified to be able to comprehend the truth." - Mankutimma

811

ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ- ।
ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ ॥
ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ ।
ಪರಮಜೀವನಯೋಗ - ಮಂಕುತಿಮ್ಮ ॥ ೮೧೧ ॥

ನಮ್ಮ ಹೊರಗಿನದನ್ನು ಹೊರೆಯೆಂದು ಭಾವಿಸದಂತೆ ನಮ್ಮ ಒಳಗನ್ನು ಸಿದ್ಧಗೊಳಿಸಿ, ನಮ್ಮ ಹೊರಗು ನಮ್ಮೊಳಗೆ ನುಗ್ಗಿ ಬಿಸಿಯನ್ನುಂಟು ಮಾಡದಂತೆ ನಮ್ಮಒಳಗನ್ನೂ ಅಳವಡಿಸಿಕೊಂಡು,ಇವೆರಡನ್ನೂ ಸರಿಸಮವಾಗಿ ಜೋಡಿಸಿಕೊಳ್ಳಲಾದರೆ ಅದೇ ಜೀವನದಲ್ಲಿ ಅದೇ ಅತ್ಯುತ್ತಮವಾದ ಯೋಗ ಎಂದು ಹೇಳಿದ್ದಾರೆ, ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

"The inner conscience must be calibrated so that the worldly dealings will not be too heavy. Everyday actions must be in such a way that they do not suffocate the inner conscience. Balancing both of them is greatest art of life." - Mankutimma

812

ಅಳಬೇಕು, ನಗಬೇಕು, ಸಮತೆ ಶಮವಿರಬೇಕು ।
ಹೊಳೆಯ ನೆರೆವೊಲು ಹೃದಯರಸ ಹರಿಯಬೇಕು ॥
ಅಲೆಯಿನಲುಗದ ಬಂಡೆಯವೊಲಾತ್ಮವಿರಬೇಕು ।
ತಿಳಿದವರ ಚರಿತವದು - ಮಂಕುತಿಮ್ಮ ॥ ೮೧೨ ॥

ಜಗತ್ತಿನಲ್ಲಿ ಬದುಕುವಾಗ ಎಲ್ಲರೊಡನೆ ಸೇರಿ ನಗಬೇಕು, ಸಮಯ ಬಂದಾಗ ಅಳಲೂ ಬೇಕು. ಆದರೆ ಅಂತರಂಗದಲ್ಲಿ ಶಮ, ಎಂದರೆ ನಿಗ್ರಹವಿರಬೇಕು. ಹೃದಯದ ಭಾವರಸವು, ಹೊಳೆಯ ನೆರೆಯಂತೆ ಹರಿಯಬೇಕು. ಆದರೆ ಆತ್ಮ ಆ ಭಾವರಸದ ಹೊಡೆತಕ್ಕೆ ಜಗ್ಗದೆ, ಬಂಡೆಯಂತೆ ದೃಢವಾಗಿ ಇರಬೇಕು. ಜಗತ್ತಿನಲ್ಲಿ, ‘ಅರಿತವರ ಮತ್ತು ಜ್ಞಾನಿ’ಗಳ ನಡವಳಿಕೆ ಆ ರೀತಿಯಿರುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"One must cry; one must laugh. But there must be a sensible limit to both that one must not cross. The emotions in our heart must flow like a river (not stagnant like a pond). But, our mind must be like a rock that does not move even a bit in spite of facing endless waves. This is the picture of a wise man." - Mankutimma

813

ಬಿಟ್ಟೆನೆಲ್ಲವನೆಂಬ ಹೃದಯಶೋಷಣೆ ಬೇಡ ।
ಕಟ್ಟಿಕೊಳ್ಳುವ ಶಿರಃಪೀಡೆಯುಂ ಬೇಡ ॥
ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು ।
ಮುಟ್ಟದಿಳೆಯಸಿ ನಿನ್ನ - ಮಂಕುತಿಮ್ಮ ॥ ೮೧೩ ॥

ನಾನು ಎಲ್ಲವನ್ನೂ ಬಿಟ್ಟಿದ್ದೇನೆ ಎಂದು ಹೃದಯ ಶೋಷಣೆಯನ್ನೂ ಮಾಡಿಕೊಳ್ಳಬೇಡ ಅಥವಾ ಎಲ್ಲವನ್ನೂ ಕಟ್ಟಿಕೊಂಡು ತಲೆನೋವನ್ನೂ ತಂದುಕೊಳ್ಳಬೇಡ. ‘ನಿರಹಂಕಾರ’ ದ ಕವಚವನ್ನು ತೊಟ್ಟುಬಿಡು. ಆಗ ಈ ಜಗತ್ತಿನ ಕತ್ತಿಯ ಅಲಗು ನಿನ್ನನ್ನು ಏನೂ ಮಾಡಲಾಗದು ಎಂದು ಘಾಸಿಗೊಳ್ಳದೆ ಬದುಕನ್ನು ಹೇಗೆ ಸಾಗಿಸಬೇಕು ಎನ್ನುವುದನ್ನು ಸೂಚಿಸಿದ್ದಾರೆ, ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.

"Let there be no pain in the heart due to complete renouncement. Let there no headaches due to excessive involvement either. Wear the armour of selflessness and the swords of this world will not be able to hurt you." - Mankutimma