Kagga Logo

Emotion and passion

419

423

419

ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ ।
ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ॥
ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು ।
ಇಳೆಯೊಳಗದೊಂದು ಸೊಗ - ಮಂಕುತಿಮ್ಮ ॥ ೪೧೯ ॥

ಒಂದು ಚಿಕ್ಕ ಗಿಡ ಪ್ರತಿನಿತ್ಯ ಹೊಸ ಚಿಗುರನ್ನು ತಳೆವಂತೆ, ಭೂಮಿಯಲ್ಲಿರುವ ನೀರ ಚಿಲುಮೆಯಲ್ಲಿ ನಿಲ್ಲದೆ ತಿಳಿನೀರುಕ್ಕುವಂತೆ, ಎಳೆಯ ಮಕ್ಕಳಲ್ಲಿ ಪ್ರತಿನಿತ್ಯ ಹೊಸತನ್ನು ಅರಿತುಕೊಳ್ಳುವಿಕೆ ನಿರಂತರವಾಗಿ ನಡೆದೇ ಇರುತ್ತದೆ. ಈ ನಿರಂತರ ಅರಿತುಕೊಳ್ಳುವಿಕೆ ಈ ಜಗತ್ತಿನಲ್ಲಿ ಬಹಳ ಸೊಗಸಾದ ವಿಚಾರ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

A small plant will sprout new leaves every day. Fresh water flows out of a spring without stopping. Young children become wiser and grow up every day. Watching all this in on this earth is itself fun. - Mankutimma

420

ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತೆಗೊಳಬೇಡ ।
ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ॥
ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? ।
ದಿಕ್ಕುವರಿಗವರವರೆ - ಮಂಕುತಿಮ್ಮ ॥ ೪೨೦ ॥

ಕೌರವರಿಗೂ ಪಾಂಡವರಿಗೂ ರಾಜ್ಯಸುಖ ಸಿಗಲೇ ಇಲ್ಲ.ಅವರವರು ಪಡೆದುಕೊಂಡು ಬಂದ ಭಾಗ್ಯ ಅವರವರಿಗೆ ಜಗತ್ತಿನಲ್ಲಿ ಖಂಡಿತ ಸಿಗುತ್ತದೆ. ಹಾಗಾಗಿ, ಮಕ್ಕಳ ಭವಿಷ್ಯವ ಕುರಿತು ಅತಿಯಾದ ಅಕ್ಕರೆ, ಅಪೇಕ್ಷೆ ಪಡಬೇಡ. ಅವರವರ ದಿಕ್ಕು ಅವರವರಿಗೆ ಇರುತ್ತದೆ ಎಂದು ಮಕ್ಕಳ ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸುವ ಮಕ್ಕಳ ತಂದೆ ತಾಯಂದಿರಿಗೆ ಒಂದು ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Don't be worried about the children's future. Fate will bring strange things beyond your control into their lives. Were the children of either Pandu or Kuru (Kaurava and brothers) able to enjoy the kingdom in peace? Each one will find his own way. - Mankutimma

421

ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ? ।
ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್ ॥
ಕ್ಷಣಮಾತ್ರಮಾನುಮದು ಕಣ್ಣೀರ ಬರಿಸುವುದು ।
ಗಣಿಸಬೇಡದನು ನೀಂ - ಮಂಕುತಿಮ್ಮ ॥ ೪೨೧ ॥

ಮಹಾನ್ ಜ್ಞಾನಿ ವ್ಯಾಸನನ್ನೂ ಪುತ್ರ ವ್ಯಾಮೋಹ ಬಿಡಲಿಲ್ಲ. ಈ ವ್ಯಾಮೋಹ ಎನ್ನುವುದು ಪ್ರಕೃತಿಯಿಂದ ಸಹಜವಾಗಿ ಹೃದಯಾಂತರಾಳಕ್ಕೆ ಬಂದು, ಎಂತಹ ಗಟ್ಟಿ ಮನುಷ್ಯನಿಗೂ, ಆ ಕ್ಷಣಕ್ಕೆ ಕಣ್ಣೀರ ತರಿಸುತ್ತದೆ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡ ಎಂದು ಒಂದು ಉಪದೇಶವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Who is able to escape the attachment towards their children? Even the omniscient sage Vyasa could not control himself when his son was separated from him. The attachment takes birth in one's heart naturally. It brings tears to one's eyes as soon as there is separation. One must not take these feelings too strongly. - Mankutimma

422

ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ ।
ಮನದಿ ತೆರೆಗಳ ಕುಲುಕಿ ಕಡೆಯುವುದುಮೊಳಿತು ॥
ಘನ ವರ್ಷ ಬಿರುಗಾಳಿ ಬಡಿಯಲಿರುಳೊಳ್ ನೆಲನ ।
ದಿನದ ಸೊಗಸಿಮ್ಮಡಿಯೊ - ಮಂಕುತಿಮ್ಮ ॥ ೪೨೨ ॥

ರಾತ್ರಿಯಲ್ಲಾ ಘನವಾದ ಮಳೆ ಸುರಿದು ಮುಂಜಾನೆ ಮಳೆ ನಿಂತ ನಂತರದ ಬೆಳಗು ಎಷ್ಟು ಆಹ್ಲಾದಕರವಾಗಿರುವ ರೀತಿ, ಮನಸ್ಸಿನಲ್ಲಿ ಅಡಗಿ ಕುಳಿತ ಅನುರಾಗ, ಪ್ರೀತಿ, ಕೋಪ, ದುಗುಡ, ದುಃಖಗಳಂತಹ ಭಾವಗಳು ಹೃದಯದಲ್ಲೇ ಮಂಥನವಾಗಿ ಒಮ್ಮೊಮ್ಮೆ ಹೊಮ್ಮಿ ಹೊರ ಬಂದರೆ ಒಳ್ಳೆಯದು. ಏಕೆಂದರೆ ಅದು ಹೊರಬಂದ ನಂತರ ಮನಸ್ಸು ನಿರಾಳವಾಗುತ್ತದೆ ಎನ್ನುವ ಅರ್ಥವನ್ನು ಈ ಮುಕ್ತಕದಲ್ಲಿ ನಮಗೆ ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.

Love and disappointment sometimes create a storm in our minds and disturb our peace. It is good. When it pours all night with strong winds, the following morning will be bright and pleasant - Mankutimma

423

ಭಾವರಾಗೋದ್ರೇಕ ತಾನೆ ತಪ್ಪೇನಲ್ಲ ।
ಧೀವಿವೇಕದ ಸಮತೆಯದರಿನದಿರದಿರೆ ॥
ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ ।
ಪಾವನವೊ ಹೃನ್ಮಥನ - ಮಂಕುತಿಮ್ಮ ॥ ೪೨೩ ॥

ಭಾವುಕತೆ,ಕೋಪ,ಉದ್ರೇಕ ಮುಂತಾದ ಭಾವಗಳು ಇರಲಿ ತಪ್ಪೇನಿಲ್ಲ. ಆದರೆ ಆ ಭಾವ ಉತ್ಕಟತೆ ಬುದ್ಧಿಯ ಸಮತೋಲನವನ್ನು ವಿಚಲಿತಗೊಳಿಸಿ ಕದಡದೆ ಇದ್ದರೆ ಅಷ್ಟೇ ಸಾಕು. ಮನಸ್ಸಿನಲ್ಲಿ ನಡೆಯುವ ಎಲ್ಲ ವ್ಯಾಪಾರವೂ ಸಹಜವಾಗಿ ಇರಲಿ ಆದರೆ ನಾವು ಈ ಜಗತ್ತಿನಲ್ಲಿ ಕಲಿತ ವಿದ್ಯೆ ಮತ್ತು ಅಂಟಿಸಿಕೊಂಡ ವ್ಯಾಮೋಹ ಮತ್ತು ಮಮಕಾರಗಳ ಮನೋವ್ಯಾಪಾರದ ಮೇಲೆ ತನ್ನ ಪ್ರಭಾವ ಬೀರದೆ ಇದ್ದರೆ ಮನಸ್ಸು ಬುದ್ಧಿಗಳು ಶುದ್ಧವಾಗಿರುತ್ತವೆ, ಎಂದು ಉಲ್ಲೇಖಮಾಡಿದ್ದಾರೆ ಈ ಮುಕ್ತಕದಲ್ಲಿ.

It is not wrong to succumb to feelings and emotions. But one must not lose the balance of wisdom and intellect. If the feelings are pure and free from innate ignorance, attachment and love then they will cleanse your heart. - Mankutimma