Kagga Logo

Don't shake the tail

379

383

379

ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು ।
ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ ॥
ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ ।
ಸುಪ್ತವಹುದೆಂತಿಚ್ಛೆ? - ಮಂಕುತಿಮ್ಮ ॥ ೩೭೯ ॥

ತೃಪ್ತವಾಗದ ಬಯಕೆಗಳು, ಜೀರ್ಣವಾಗದ ಆಹಾರದಂತೆ, ಒಳಗೊಳಗೇ ಕೊಳೆತು ವಿಷವಾಗಿಬಿಡುತ್ತದೆ. ಆ ರೀತಿಯ ಬಯಕೆಗಳು ಜೀವವನ್ನು ಉನ್ಮಾದ ಮತ್ತು ಉದ್ರೇಕಗೊಳಿಸುತ್ತವೆ. "ಈ ರೀತಿಯ ಬಯಕೆಗಳು ಶಾಂತವಾಗಿ ಮೇಲೇಳದಂತೆ ಇರುವುದು ಎಂದೋ?" ಎಂದು ಮಾನವನ ಆಸೆಗಳ ಬಗ್ಗೆ ಒಂದು ಸುಂದರ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"Desire that knows no satisfaction is similar to the food that does not get digested. It rots inside and turns into poison. They intoxicate people's mind and create restlessness. How do we lay these desires to rest? " - Mankutimma

380

ಹುಲಿಯ ಕೆಣುಕುವುದು ಹುಲಿ; ಕಪಿಯನಣಕಿಪುದು ಕಪಿ ।
ಹುಲಿಕಪಿಗಳವಿತಿರದ ನರಜಂತುವೆಲ್ಲಿ? ॥
ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು ।
ಕುಲಕದಿರು ಬಾಲವನು - ಮಂಕುತಿಮ್ಮ ॥ ೩೮೦ ॥

ಒಂದು ಹುಲಿಯನ್ನು ಮತ್ತೊಂದು ಹುಲಿ ಕೆಣಕುವುದು.ಒಂದು ಕಪಿ ಮತ್ತೊಂದು ಕಪಿಯನ್ನು ಅಣಕಿಸುತ್ತದೆ. ಇವೆರಡಕ್ಕೂ ಅವುಗಳದೇ ಆದಂತ ಗುಣಗಳಿವೆ. ಆದರೆ ಹುಲಿ ಮತ್ತು ಕಪಿಗಳೆರಡರ ಸಮ್ಮಿಶ್ರ ಗುಣಗಳಿಲ್ಲದ ಮನುಷ್ಯ ಸಿಗುವುದೇ ಇಲ್ಲ. ಹಾಗೆ ಎರಡೂ ಗುಣಗಳಿರುವ ಈ ಮನುಷ್ಯನ ಎರಡೂ ಗುಣಗಳನ್ನು ಹಾಗೆ ಬಿಡುವುದೇ ಜಾಣತನ."ನಿನ್ನಲ್ಲಿರುವ ಈ ಗುಣಗಳನ್ನು ಕೆದಕದೆ ಇರು" ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"A tiger will provoke another tiger. A monkey will provoke anohter monkey. Can anyone find a man who does not have a tiger and a monkey inside him? An intelligent person will let the sleeping animals inside him lie. Don't try to shake the tail." - Mankutimma

381

ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ? ।
ಇತರರೊಳು ವಿಷಪರೀಕ್ಷೆಗೆ ನಿಲುವರಾರು? ॥
ಮಿತಕುಕ್ಷಿ ಮಿತಭುಕ್ತ; ಮತ್ತಾರ್ ಜಿತೇಂದ್ರಿಯನು? ।
ಅತಿಚರ್ಚೆ ಸಲದಲ್ಲಿ - ಮಂಕುತಿಮ್ಮ ॥ ೩೮೧ ॥

ಜನ್ಮದಿಂದಲೇ ಇಂದ್ರಿಯ ಲಾಲಸೆ ಸತ್ತವನು ಇದ್ದರೆ, ಅದು ಅತಿಶಯದ ಅದೃಷ್ಟವಲ್ಲವೇ? ಹಾಗಲ್ಲದೆ ಘೋರ ಪರೀಕ್ಷಗೆ ಒಳಪಡುವವರಾರು? ಕಡಿಮೆ ಹಸಿವಾಗುವವನೋ ಅಥವಾ ಮಿತವಾಗಿ ಆಹಾರ ಸೇವಿಸುವವನೋ, ಯಾರು ಜಿತೇಂದ್ರಿಯರು? ಎನ್ನುವ ಪ್ರಶ್ನೆಗಳನ್ನು ತೆಗೆದು, ಈ ವಿಷಯದಲ್ಲಿ ಅತಿಯಾದ ಚರ್ಚೆ ಮಾಡಬಾರದು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"Can we say that a person who is born without senses (eyes or ears) is the most fortunate? Can others (those born with senses) test the poison and still stand? If a person has less hunger and consumes less, who else can we call as the 'conquerer of senses (desires)'? There is no need to over analyze this." - Mankutimma

382

ಇಂದ್ರಿಯವ ಜಯಿಸಿದೆಯೊ? ಮಂದವೋ ನಿನ್ನಕ್ಷಿ? ।
ಸೌಂದರ್ಯ ಯಕ್ಷಿಣಿಯೆ ನಿನ್ನ ತೊರೆದಿಹಳೋ? ॥
ಅಂಧನೆ ವಿರಕ್ತನ್; ಅಪ್ಸರೆಯ ಕಾಣದನೆ ಯತಿ ।
ಕಂಡು ಕೆರಳನಾರೊ! - ಮಂಕುತಿಮ್ಮ ॥ ೩೮೨ ॥

ನೀನೇನು ಇಂದ್ರಿಯಗಳ ಜಯಿಸಿದ್ದೀಯೊ? ಅಥವಾ ಸೌಂದರ್ಯವನ್ನು ನೋಡುವ ಕ್ಷಮತೆಯನ್ನು ಕಳೆದುಕೊಂಡಿದ್ದೀಯೋ? ಅಥವಾ ಈ ಜಗತ್ತಿನ ಸೌಂದರ್ಯದಲ್ಲಿನಿನಗೆ ಆಸೆ ಮೂಡಿಸುವ ಆ ಯಕ್ಷಿಣಿ ನಿನ್ನನ್ನು ತೊರೆದು ಹೋಗಿದ್ದಾಳೋ? ಕಣ್ಣು ಕಾಣದವನು ಏನನ್ನೂ ನೋಡದಿದ್ದರೆ ಅವನ ಮನದೊಳಗೆ ಆಸೆಗಳು ಇಲ್ಲವೇನು? ತಪಸ್ಸಿನಲ್ಲಿ ನಿರತ ಯತಿಯು ಅಪ್ಸರೆಯನ್ನು ನೋಡದಿರುವನೆ? ಹಾಗೆ ಕಂಡೂ ಆಸೆಪಡದೆ ಇರುವವರಾರು? ಎಂದು ಅಶಾ ಪ್ರವೃತ್ತವಾದ ಮನುಷ್ಯನ ಮನಸ್ಸನ್ನು ಕುರಿತುಹತ್ತುಹಲವಾರು ಪ್ರಶ್ನೆಗಳನ್ನು, ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"When one claims to have conquered his senses (desires), one must be skeptical. Did he really conquer? or his senses have gone weak? or the lady of beauty abandoned him? A blind person is naturally inclined away from enjoying beauty. Any one can be a saint as long as he has not seen a celestal damsel. Is there anyone who can resist the temptation after seening the damsels?" - Mankutimma

383

ಜನಕಜೆಯ ದರುಶನಿದಿನಾಯ್ತು ರಾವಣ ಚಪಲ ।
ಕನಕಮೃಗದರುಶನದೆ ಜಾನಕಿಯ ಚಪಲ ॥
ಜನವವನ ನಿಂದಿಪುದು, ಕನಿಕರಿಪುದಾಕೆಯಲಿ ।
ಮನದ ಬಗೆಯರಿಯದದು - ಮಂಕುತಿಮ್ಮ ॥ ೩೮೩ ॥

ಸೀತೆಯನ್ನು ನೋಡಿ ರಾವಣನಿಗೆ ಅವಳನ್ನು ಪಡೆಯಬೇಕೆಂಬ ಚಪಲವಾಯ್ತು. ಆದರೆ ಸೀತೆಗೆ ಬಂಗಾರದ ಜಿಂಕೆಯನ್ನು ನೋಡಿ ಅದನ್ನು ಪಡೆಯಬೇಕೆಂಬ ಚಪಲವಾಯ್ತು. ಆದರೆ ಜನರು ಸೀತೆಗೆ ಕನಿಕರ ತೋರುತ್ತಾರೆ ಮತ್ತು ರಾವಣನನ್ನು ದುಷ್ಟನೆಂದು ಜರಿಯುತ್ತಾರೆ. ಹಾಗೆ ಭಿನ್ನವಾಗಿ ಅಭಿಪ್ರಾಯಪಡುವ ಜನರು ಮನವನ್ನು ಸರಿಯಾಗಿ ಅರಿಯದೆ ಮಾತನಾಡುತ್ತಾರೆ ಎಂದು ಜನಸಾಮಾನ್ಯರ ಮನೋಭಾವದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"Ravana's desires were aroused when he saw Sita (daughter of Janaka). Sita's desires were aroused when she saw the golden deer. We all know what followed. People criticize Ravana, but sympathize with Sita - even though both gave in to their desires. No one can know how mind reacts." - Mankutimma