Divine actions
594
—
598
594
ಬಿಡುವಿಲ್ಲದೀ ಜೀವಿತಾಪಣದ ಸರಕೆಣಿಸೆ ।
ಕಡೆಯೆಂದು? ಮುಗಿಯದಿಹ ಲಾಭನಷ್ಟಗಳ ॥
ಕಡತದೊಳ್ ಅದೆಂದಿನಾ ಲೆಕ್ಕವೇ ತೀರ್ಮಾನ? ।
ಬಿಡು ಲಾಭದಾತುರವ - ಮಂಕುತಿಮ್ಮ ॥ ೫೯೪ ॥
ಬಿಡುವಿಲ್ಲದೆ ನಡೆಯುವ ಈ ಜಗತ್ತಿನ ಮಾರುಕಟ್ಟೆಯಲ್ಲಿ, ನಮಗೆ ನಮ್ಮ ಸರಕನ್ನ ಎಣಿಸಿ ಕಡೆಗೆ ಇಳಿಸಿ "ಇಂದಿನ ವ್ಯಾಪಾರ ಮುಗಿಯಿತು" ಎಂದು ಅಂದಿನಲಾಭ ನಷ್ಟಗಳ ಲಾಭ ನಷ್ಟಗಳ ಲೆಕ್ಕಾ ಹಾಕಲಾಗುವುದೆ? ಸಾಧ್ಯವಿಲ್ಲ, ಹಾಗಾಗಿ ನೀನು ನಿನ್ನ ಜೀವನವೆಂಬ ವ್ಯಾಪಾರದಲ್ಲಿ ಲಾಭದ ಆಸೆಯನ್ನು ಬಿಡು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Life is like a shop that runs non-stop. Our job is to keep the account books. Since it is a never ending story, how can we know if we are making profit or loss. We can only know short-term results at the end of each day - but in the long run they may be exactly reverse. So, stop running behind short-term profits. - Mankutimma
595
ಎನಿತು ನೀಂಗೆಲಿದೆಯೆಂದೆನರು ಬಲ್ಲವರೆಂದು- ।
ಮೆನಿತು ನೀಂ ಪೋರ್ದೆ ಯೆನಿತನು ಪೊತ್ತೆಯೆನುವರ್ ॥
ಗಣನೆ ಸಲುವುದು ತೋರ್ದ ಪೌರುಷಕೆ, ಜಯಕೆಲ್ಲ ।
ದಿನದಿನದ ಗರಡಿಯಿದು - ಮಂಕುತಿಮ್ಮ ॥ ೫೯೫ ॥
ಅರಿತವರು, ನೀ ಏನನ್ನು ಅಥವಾ ಎಷ್ಟು ಗೆದ್ದೆಯೆಂದು ಕೇಳುವುದಿಲ್ಲ, ನೀ ಎಷ್ಟುಹೋರಾಡಿದೆ ಎಂದೋ ಅಥವಾ ನೀ ಎಷ್ಟು ಭಾರವನ್ನು ಹೊತ್ತೆ ಎಂಬುದನ್ನು ನೋಡುತ್ತಾರೆ. ಏಕೆಂದರೆ ಬದುಕಿನ ಹೋರಾಟದಲ್ಲಿ ನಾವೆಷ್ಟು ಧೈರ್ಯದಿಂದ, ತಾಳ್ಮೆಯಿಂದ ಹೋರಾಡಿದ್ದೇವೆ ಎನ್ನುವುದೇ ಗಣನೆಗೆ ಬರುವುದು. ನಾವು ಪಡೆದ ಜಯಕ್ಕೆ ಅಲ್ಲ. ಈ ಜಗತ್ತಿನ ಹೋರಾಟ ಒಂದು ಪ್ರತಿ ನಿತ್ಯದ ಗರಡಿಮನೆಯಂತೆ. ಪ್ರತಿ ನಿತ್ಯ ವ್ಯಾಯಾಮ ಮಾಡಬೇಕು, ಪ್ರತಿ ನಿತ್ಯವೂ ಕುಸ್ತಿ ಮಾಡಬೇಕು. ಇಲ್ಲಿ ಎಷ್ಟು ಕಸರತ್ತು ಮಾಡಿದ್ದೇವೆ ಎನ್ನುವುದೇ ಮುಖ್ಯವಾಗುತ್ತದೆ ಹೊರತು ಗೆಲುವಲ್ಲ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
Those who are wise will never ask you how many battles you won in life. They will ask how many you fought, how hard you tried, how much burden did you carry. For them, the valiant effort matters and not the victories. This world is a everyday gym. - Mankutimma
596
ಗರಡಿಯ ಸಾಮಿಂದೆ ನೀನೆದುರಾಳ ಗೆಲ್ಲದೊಡೇಂ? ।
ಬರದಿಹುದೆ ನಿನಗನಿತು ಕಾಯಾಂಗಪಟುತೆ? ॥
ವರ ಸದ್ಯಕಿಲ್ಲದೊಡೆ ಬರಿದಾಗುವುದೆ ಪೂಜೆ? ।
ಪರಿಶುದ್ಧ ಮನವೆ ವರ - ಮಂಕುತಿಮ್ಮ ॥ ೫೯೬ ॥
ನೀನು ಗರಡಿಯ ಸಾಮನ್ನು ಮಾಡಿ, ಕುಸ್ತಿಯಲ್ಲಿ ಎದುರಾಳಿಯಮೇಲೆ ಗೆಲ್ಲದಿದ್ದರೆ ಏನಂತೆ, ನಿನ್ನ ದೇಹವಂತೂ ಗಟ್ಟಿಯಾಗುವುದಲ್ಲವೆ? ಪೂಜೆ ಮಾಡಿದ ಕೂಡಲೇ ವರ ಸಿಗದಿದ್ದರೆ, ಪೂಜೆಯನ್ನು ವ್ಯರ್ಥವೆನ್ನುತ್ತೀಯೇನು? ಗರಡಿ ಸಾಮಿಂದ ದೇಹ ಗಟ್ಟಿಯಾಗುವುದು ಹೇಗೆ ಸಂದ ಫಲವೋ ಹಾಗೆ ಮನಸ್ಸು ಶುದ್ಧವಾಗುವುದೇ ಪೂಜೆಯಿಂದ ಸಲ್ಲುವ ಉತ್ತಮ ಫಲವೆಂದು, ಜಗತ್ತಿನ ಬದುಕಿನಲ್ಲಿ ನಮ್ಮೆಲ್ಲರ ಹೋರಾಟದ ಫಲಶೃತಿಯ ರೂಪವನ್ನು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
You are a wrestlers practicing in a gym. So what if you do not defeat the opponent today? Will you not get better physique because of the fight? So what if your prayers at the temple are not answered immediately? Having a pure mind is itself a boon. - Mankutimma
597
ಬಿತ್ತ ಮಳೆಗಳವೋಲು ಯತ್ನ ದೈವಿಕ ನಮಗೆ ।
ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು ॥
ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ ।
ಗೊತಿಲ್ಲ ಫಲದ ಬಗೆ - ಮಂಕುತಿಮ್ಮ ॥ ೫೯೭ ॥
ಸಕಾಲಕ್ಕೆ ಬಿತ್ತುವ ಬೀಜ ಮತ್ತು ಬರುವ ಮಳೆಯಿಂದಾಗಿ ಬೆಳೆ ಬರಬೇಕು. ಸಕಾಲಕ್ಕೆ ಸರಿಯಾದ ಬೀಜವನ್ನು ಬಿತ್ತುವುದು ನಮ್ಮ ಯತ್ನ, ಸಕಾಲಕ್ಕೆ ಸರಿಯಾದ ಹದದಲ್ಲಿ ಬರುವ ಮಳೆ ದೈವ ಕೃಪೆಯಿಂದಾಗಬೇಕು. ನಾಮ್ಮ ಪ್ರಯತ್ನ ಮತ್ತು ದೈವ ಕೃಪೆಗಳು ಸೇರಿದರೆ ಬೆಲೆ ಹುಲುಸಾಗಿ ಬೆಳೆಯುತ್ತದೆ. ನಮ್ಮ ಪ್ರಯತ್ನವನ್ನು ಮಾಡದಿದ್ದರೆ ಅದು ನಮ್ಮ ಕರ್ತವ್ಯ ಲೋಪ. ದೈವ ಕೃಪೆಯಾಗದಿದ್ದರೆ ದೈವ ಮುನಿಸಿಕೊಂಡಿದೆ ಎಂದೇ ತಿಳಿಯಬೇಕು. ಹಾಗಾಗಿ ನಮಗೆ ನಮ್ಮ ಕೆಲಸಕಾರ್ಯಗಳಿಗೆ ಸೂಕ್ತ ಫಲ ಸಿಗುವುದೋ ಇಲ್ಲವೋ ಎಂಬ ಅರಿವಿಲ್ಲ ಎಂದು ಉಲ್ಲೇಖಮಾದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The quality of the crop depends on our efforts (seeds, work and other efforts) as well as providence. When both things work out, then the crop will be excellent. If efforts lack, it is our fault. If rains don't work out then it creates anxiety - but nothing much can be done about it. We will never know about the crop until it comes. - Mankutimma
598
ಬದುಕು ಕದನವೆಂದಂಜಿ ಬಿಟ್ಟೋಡುವನು ।
ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ॥
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ- ।
ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ ॥ ೫೯೮ ॥
ಜೀವನವನ್ನು ಒಂದು ಕದನವೆಂದು, ಅದಕ್ಕೆ ಹೆದರಿ ಬಿಟ್ಟು ಓಡಿಹೋಗುವವನು ವಿಧಿಯ ವಿನ್ಯಾಸದಿಂದ ಹೊರಗುಳಿಯಲು ಸಾಧ್ಯವೇ? ಹಾಗೆ ಹೆದರಿ ಹೋದರೆ ವಿಧಿಯು ವಿಧಿಸಿದ ಕರ್ಮವ ಸವೆಸದೆ ಈ ಬದುಕಿನಿಂದ ಹೋಗಲು ಸಾಧ್ಯವೇ? ಹಾಗಾಗಿ ಮನಸ್ಸಿನಲ್ಲಿ ಧೈರ್ಯವನ್ನು ತುಂಬಿಕೊಂಡು, ವಿವೇಕವನ್ನೇ ಆಯುಧವನ್ನಾಗಿಸಿಕೊಂಡು, ಬಂದದ್ದನ್ನೆಲ್ಲಾ ಎದುರಿಸುತ್ತೇನೆ ಮತ್ತು ಸಹಿಸುತ್ತೇನೆ ಎಂದು ಗಟ್ಟಿಯಾಗಿ ನಿಂತರೆ, ಭವ ಸಾಗರವನ್ನು ಈಜಲು ನಮ್ಮ ಪ್ರಯತ್ನಕ್ಕೆ ಆ ವಿಧಿಯೂ ಸಹ ಸಹಾಯಮಾಡುತ್ತದೆ, ಎಂದು ನಮಗೆ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If one thinks that life is a tough battle and tries to run away; will he not become snacks for the providence? Make your heart as strong as iron. Hold the club of intellect and face fate head on - it will relent and support you. - Mankutimma