Kagga Logo

Dirt makes us conscious of cleanliness

829

833

829

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ ।
ತಳದ ಕಸ ತೇಲುತ್ತ ಬಗ್ಗಡವದಹುದು ॥
ಕಲಕದದ್ದೆದೆ ಕೊಂಚ ಬಿಟ್ಟಿದ್ದೊಡದು ಮರಳಿ ।
ತಿಳಿಯಹುದು ಶಾಂತಿಯಲಿ - ಮಂಕುತಿಮ್ಮ ॥ ೮೨೯ ॥

ಮನಸ್ಸೆಂಬುದು ಒಂದು ಸರೋವರ ಅಥವಾ ಕೊಳವಿದ್ದಂತೆ. ಲೋಕದ ವಿಚಾರಗಳು ಅದರೊಳಕ್ಕೆ ಬಿದ್ದರೆ ತಳಗೆ ಅಡಗಿದ್ದ ಕಸ ಕದಡಿ ಹೋಗುತ್ತದೆ ಮತ್ತು ಬಗ್ಗಡವಾಗುತ್ತದೆ. ಮತ್ತೆ ಸ್ವಲ್ಪ ಹೊತ್ತು ಕದಡದೆ ಕಲಕದೆ ಇದ್ದರೆ, ಮತ್ತೆ ತಿಳಿಯಾಗುವುದು ಎಂದು ಮಾನಸ ಸರೋವರದ ವಿಚಾರವನ್ನು ನಮಗೆ ಅರುಹಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.

"Your mind is like the water of the pond. When undisturbed, it will be clear. But people of this world will get into the pond and as a result the dirt from the bottom will float and make it dirty. But if you let it settle without any more disturbance, it will again get cleared. That is the power of finding peace inside." - Mankutimma

830

ಕೊಳಕೆಂದು, ಹುಳುಕೆಂದು, ಹೇಸಿಗೆಯ ಹುಳುವೆಂದು ।
ಇಳೆಯೊಳಾವುದರೊಳಮಸಹ್ಯಪಡಬೇಡ ॥
ಬೆಲೆಯುಂಟು ಕೊಳೆಗಮೀ ಜೀವಸಾಮಾಗ್ರಿಯಲಿ ।
ಕೊಳೆ ಶುಚಿಖ್ಯಾಪಕವೊ - ಮಂಕುತಿಮ್ಮ ॥ ೮೩೦ ॥

"ನಿನ್ನ ಮನಸ್ಸು ತಿಳಿಯಾಗಿರಿಸಿಕೊಳ್ಳಬೇಕು ಎಂದು ನಿನಗೆ ಬೇಡವಾದದ್ದೆಲ್ಲ ‘ಕೊಳಕು, ಕುಲುಕು, ಹೇಸಿಗೆ, ಹುಳ’ ಎಂದು ಹೇಳುತ್ತಾ ಈ ಜಗತ್ತಿನಲ್ಲಿರುವಾವುದನ್ನೂ ಅಸಹ್ಯ ಪಟ್ಟುಕೊಳ್ಳಬೇಡ". ಜಗತ್ತಿನ ಜೀವನದ ಸಮಗ್ರತೆಯಲ್ಲಿ, ಸೃಷ್ಟಿಯ ಪ್ರತಿಯೊಂದು ವಸ್ತುವಿಗೂ ಒಂದು ಬೆಲೆಯುಂಟು. ಕೊಳೆ ನಮಗೆ ಶುಚಿಯನ್ನು ಜ್ಞಾಪಿಸುತ್ತಿರುತ್ತದೆ, ಎಂದು ಮಾನಸಿಕ ಸಮಭಾವದ ಮೂಲಕ ಶಾಂತಿಯನ್ನು ಸಾಧಿಸುವ ಪರಿಯನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

"Don't cringe and berate anything in this world as filth, rotten, dirty or infested. There is value to filth also in this symbiotic nature of life. It is the filth that sets apart the clean as clean." - Mankutimma

831

ತಳೆಯಲಾರನೆ ಬೊಮ್ಮ ಬೀಭತ್ಸರೂಪಗಳ? ।
ನಲಿಯಲಾರನೆ ತಿಪ್ಪೆರೊಚ್ಚು ನಾತದಲಿ? ॥
ಮಲವೇನೊ! ಹೊಲೆಯೇನೊ! ಜೀವಸಂಬಧವಲ ।
ಮಲಿನದಲಿ ನೆನೆ ಶುಚಿಯ - ಮಂಕುತಿಮ್ಮ ॥ ೮೩೧ ॥

ಆ ಪರಬ್ರಹ್ಮನು ಭಯಂಕರವಾದ ರೂಪಗಳನ್ನು ಧರಿಸಲಾರನೆ? ಅವನು ಹೊಲಸು ನಾರುವ ತಿಪ್ಪೆಗುಂಡಿಯಲ್ಲೂ ಸಂತಸಿಸಲಾರನೆ? ಬದುಕಿನ ಸಂಬಂಧದಲಿ ಮಲಿನವಾದದ್ದು, ಹೊಲಸಾದದ್ದು ಎಲ್ಲವೂ ಉಂಟು. ಮಲಿನತೆಯಲ್ಲಿ ಇದ್ದರೂ ಶುಚಿತ್ವವನ್ನು ನೀನು ಸದಾ ನೆನೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

"Can God not take form that can scare you? Can God not enjoy himself in all the dirty stinking filth? What is filth? What is dirt? All of it has its place in this web of life. In dirt, one must remember the cleanliness and be happy." - Mankutimma

832

ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ ।
ಬಡವರಿಂಗುಪಕೃತಿಯೊ, ಆವುದೋ ಮನದ ॥
ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ ।
ಬಿಡುಗಡೆಯೊ ಜೀವಕ್ಕೆ - ಮಂಕುತಿಮ್ಮ ॥ ೮೩೨ ॥

ಗುಡಿಯ ಪೂಜೆಯಿಂದಲೋ, ಪುರಾಣ ಪುಣ್ಯ ಕಥಾ ಶ್ರವಣದಿಂದಲೋ, ಮೈ ಮರೆತು ಸೊಗಸಾದ ಪ್ರಕೃತಿಯ ನೋಟವನ್ನು ನೋಡುವುದರಲ್ಲಿಯೋ, ದಯಾ ಭಾವದಿಂದ ದೀನಗರಿಗುಪಕಾರವನ್ನು ಮಾಡುವುದರಿಂದಲೋ, ಹೀಗೆ ಯಾವುದಾದರೂ ರೀತಿಯಲ್ಲಿ ಮನಸ್ಸಿನ ಚಂಚಲ ಬಡಿದಾಟವನ್ನು ನಿಲ್ಲಿಸಿ ನೆಮ್ಮದಿಯನ್ನು ಪಡೆಯಬಹುದಾದರೆ, ಅದೇ ‘ಜೀವ’ ಕ್ಕೆ ಮುಕ್ತಿ ಅಥವಾ ಬಂಧನದಿಂದ ಬಿಡುಗಡೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"Anything that makes us happy and brings peace to us is liberating. Be it worshiping at a temple, listening to a story (about God), seeing something beautiful, a song, helping the poor – anything would do as long as it can rest the anxiety in the mind and attain peace." - Mankutimma

833

ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ ।
ಜಗವ ಸುಡುಗಾಡೆನುವ ಕಟುತಪಸು ಬೇಡ ॥
ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ ।
ಮಿಗೆಚಿಂತೆ ತಲೆಹರಟೆ - ಮಂಕುತಿಮ್ಮ ॥ ೮೩೩ ॥

ನಗುನಗುತಾ ಇರುವ ಕಣ್ಣುಗಳಿಗೆ ಹೊಗೆಯನೂದ ಬೇಡ. ಈ ಜಗತ್ತು ಒಂದು ಸುಡುಗಾಡು, ಇದೇಕೆ ಬೇಕು ಎನ್ನುವ ಹಠವೂ ಬೇಡ. ಸಹಜವಾಗಿ ತಂದೆ ತಾಯಿಗಳ ಮುಂದೆ ನಡೆದು ನಲಿದಾಡುವ ಮಗುವಂತೆ ಜೀವಿಸು. ಮಿಕ್ಕೆಲ್ಲಾ ವಿಚಾರಗಳೂ ಕೇವಲ ‘ತಲೆಹರಟೆ ‘ ಎಂದು ಬಾಳುವ ರೀತಿಯ ಬಗ್ಗೆ ಒಂದು ಕಿವಿಮಾತನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

"Don't blow smoke into happy eyes. Don't give up on this world equating this to be just a cemetery. Get on with your work with same enthusiasm as a kid walking and playing in front of its parents. Leave all other worries behind – they are all just banter." - Mankutimma